Saturday 29 December 2007

ಬಡವಾ ನೀ ಮಡಗಿದ ಹಾಂಗಿರು ! - ಒಂದು ತರಲೆ ಗುಬ್ಬಚ್ಚಿಯ ನೀತಿ ಕಥೆ.

( ಅನಾಮಧೇಯ ಇಂಗ್ಲೀಷ್ ಮೂಲದಿಂದ ಅನುವಾದಿತ)

- ನವರತ್ನ ಸುಧೀರ್.

ಗುಬ್ಬಚ್ಚಿ ಚಿಕ್ಕ ಪಕ್ಷಿ ಅದರ ರೆಕ್ಕೆ ಪುಕ್ಕಗಳು ಜಾಸ್ತಿಯಾಗಿಲ್ಲದಿರುವುದರಿಂದ ಹೆಚ್ಚಿನ ಚಳಿ ತಡೆಯಲಾಗುವುದಿಲ್ಲ. ಅದೇ ಕಾರಣಕ್ಕಾಗಿ ಉತ್ತರಭಾರತದ ಗುಬ್ಬಚ್ಚಿಗಳೆಲ್ಲವೂ ಚಳಿಗಾಲ ಬರುತ್ತಿದ್ದಂತೆ ಬೆಚ್ಚಗಿರುವ ದಕ್ಷಿಣ ಕ್ಕೆ ವಲಸೆ ಹೋಗುತ್ತವಂತೆ.

ಒಂದು ಗುಬ್ಬಚ್ಚಿ ಮಾತ್ರ ಎಲ್ಲರಿಗಿಂತಲೂ ತಾನು ಸ್ವಲ್ಪ ಜಾಸ್ತಿ ಬುದ್ಧಿವಂತ ಎಂದು ಅಹಂಭಾವವಿದ್ದು, ಎಲ್ಲರ ಹಾಗೆ ನಾನೇಕೆ ಮಾಡಬೇಕು? ಬದಲಾಗಿ ಈ ಬಾರಿ ಇಲ್ಲಿಯೇ ಉಳಿದು ಚಳಿಗಾಲದ ಆನಂದವನ್ನು ಸವಿಯೋಣ ಅಂದುಕೊಂಡು ತನ್ನ ಬಂಧು ಬಾಂಧವರ ಜೊತೆ ದಕ್ಷಿಣಕ್ಕೆ ಹೋಗದೆ ಉಳಿದುಕೊಂಡಿತು. ಚಳಿಗಾಲ ಶುರುವಾದ ಮೊದಲ ಕೆಲವು ದಿನಗಳಲ್ಲೇ ಆ ಗುಬ್ಬಚ್ಚಿಗೆ ಮೈ ಕೊರೆತ ಮತ್ತು ನಡುಕ ಆರಂಭವಾಗಿ ಹೆದರಿಕೆಯಾಗತೊಡಗಿತು. ಆರಂಭದಲ್ಲೇ ಹೀಗಾದರೆ ಮುಂದೇನು ಗತಿಯಪ್ಪಾ ಎಂದು ಯೋಚಿಸಿ ಸ್ವಲ್ಪ ತಡವಾಗಿದ್ದರೂ ಚಿಂತೆಯಿಲ್ಲ ಈಗಲಾದರೂ ದಕ್ಷಿಣಕ್ಕೆ ಹಾರಿಬಿಡೋಣ ಎಂದು ನಿರ್ಧಾರ ಮಾಡಿ ಬೆಳಕಾಗುವ ಮೊದಲೇ ದಕ್ಷಿಣಾಭಿಮುಖವಾಗಿ ಹಾರತೊಡಗಿತು. ರೆಕ್ಕೆಗಳ ಮೇಲೆ ಶೇಖರವಾಗಿದ್ದ ಮಂಜಿನ ತೆಳು ಪದರ ಆ ಚಳಿಯಲ್ಲಿಯೇ ಸ್ವಲ್ಪ ಹಿಮಗಟ್ಟಿ ರೆಕ್ಕೆ ಭಾರ ಎನಿಸತೊಡಗಿತು. ಬೇಗನೆ ಅಯಾಸವೂ ಆಯಿತು. ದಿಗಂತದಲ್ಲಿ ಸೂರ್ಯ ಆಗತಾನೆ ಮೇಲೇರುತ್ತಿದ್ದ. ಅವನ ಕಿರಣಗಳು ಇನ್ನೂ ಅಷ್ಟು ಪ್ರಖರವಾಗಿರಲಿಲ್ಲ. ಆಗಾಗ ಮಧ್ಯೆ ಸ್ವಲ್ಪ ಭೂಮಿಯ ಮೇಲಿಳಿದು ವಿಶ್ರಾಂತಿ ಪಡೆದು ಮುಂದುವರೆಯುವುದು ಒಳಿತು ಎಂದೆನಿಸಿ ಆ ಗುಬ್ಬಚ್ಚಿ ಒಂದು ಹುಲ್ಲು ಗಾವಲಿನ ಮೇಲಿಳಿಯಿತು. ಅಲ್ಲಿಯೇ ಮೇಯುತ್ತಿದ್ದ ಹಸುವೊಂದರ ಹಿಂದೆ ನೆರಳಿನಲ್ಲಿ ಕುಳಿತು ವಿಶ್ರಮಿಸತೊಡಗಿತು. ತನ್ನ ಹಿಂದೆ ಕಾಲ ಬಳಿ ಸಣ್ಣ ಗುಬ್ಬಚ್ಚಿಯೊಂದು ಕುಳಿತಿದೆ ಎಂಬ ಅರಿವಿಲ್ಲದ ಆ ಹಸು ತನ್ನ ಪ್ರಾತರ್ವಿಧಿಗನುಗುಣವಾಗಿ ಸೆಗಣಿ ಹಾಕಿತು. ತಪತಪನೆ ಬಿದ್ದ ಬಿಸಿ ಬಿಸಿ ಸೆಗಣಿಯಲ್ಲಿ ಆ ಚಳಿಯಿಂದ ನಡುಗುತ್ತಿದ್ದ ಗುಬ್ಬಿ ಸಂಪೂರ್ಣವಾಗಿ ಮುಳುಗಿಹೋಯಿತು.

ಸದೈವವಶಾತ್ ಆ ಬಿಸಿ ಸೆಗಣಿಯಿಂದ ಗುಬ್ಬಚ್ಚಿಯ ರೆಕ್ಕೆಯ ಮೇಲ್ಗಟ್ಟಿದ್ದ ಹಿಮ ಬೇಗನೆ ಕರಗಿ ಅದರ ದೇಹಕ್ಕೂ ಸ್ವಲ್ಪ ತಾಪ ತಟ್ಟಿ ಮೈ ಬೆಚ್ಚಗಾಯಿತು. ಮನಸ್ಸಿಗೆ ಅದೇನೋ ಹಿತವಾದ ಅನುಭವವಾಯಿತು. ಗುಬ್ಬಿಗೆ ಹಾಡಬೇಕೆನಿಸಿತು. ತನಗೆಷ್ಟು ಸಾಧ್ಯವೋ ಅಷ್ಟುಎತ್ತರದ ಧ್ವನಿಯಲ್ಲಿಸುಶ್ರಾವ್ಯವಾಗಿ ಹಾಡತೊಡಗಿತು.

ಅಲ್ಲಿ ಹತಿರದಲ್ಲಿಯೇ ನಡೆದು ಹೋಗುತ್ತಿದ್ದ ಒಂದು ಬೆಕ್ಕಿಗೆ ಈ ಹಾಡು ಕೇಳಿಸಿತು. ಈ ಹಾಡಿನ ಮೂಲ ಎಲ್ಲಿ ಎಂದು ಹುಡುಕಿದ ಆ ಬೆಕ್ಕು ಬೇಗನೆ ಆ ಸೆಗಣಿಯ ಕುಪ್ಪೆಯನ್ನು ಕೆದರಿಸಿ, ಅಲ್ಲಿ ಹುದುಗಿ ಹಾಡಿನಲ್ಲಿ ತನ್ಮಯವಾಗಿದ್ದ ಗುಬ್ಬಚ್ಚಿಯನ್ನು ಹಿಡಿದು ಕಚ್ಚಿ ನುಂಗಿಹಾಕಿತು.

ನೀತಿ ಪಾಠ ೧: ನಿಮ್ಮ ಮೇಲೆ ಸೆಗಣಿ ಹಾಕುವವರೆಲ್ಲರೂ ನಿಮ್ಮ ಶತ್ರುಗಳಲ್ಲ!

ನೀತಿ ಪಾಠ ೨: ನಿಮ್ಮನ್ನು ಸೆಗಣಿಯ ಕುಪ್ಪೆಯಿಂದ ಕೆದರಿ ಹೊರಗೆ ತೆಗಯುವರೆಲ್ಲರೂ ನಿಮ್ಮ ಮಿತ್ರರಲ್ಲ!

ನೀತಿ ಪಾಠ ೩: ನೀವು ಸೆಗಣಿಯ ರಾಶಿಯಲ್ಲಿ ಮುಳುಗಿದ್ದಾಗ್ಯೂ , ಬೆಚ್ಚನೆಯ ಅನುಭವವಾಗಿ ಮನಸ್ಸಿಗೆ
ಹಿತವೆನಿಸುತ್ತಿದ್ದರೆ ಬಾಯಿ ಮುಚ್ಚಿಕೊಂಡಿರಿ! ಹಾಡಬೇಡಿ! ಯಾರಾದರೂ ಉದ್ಧಾರ
ಮಾಡಿಯಾರು.ಎಚ್ಚರಿಕೆ!

***************************************

Sunday 23 December 2007

ಕನ್ನಡ ನಾಡಿಗೆ, ಕನ್ನಡಿಗರಿಗೆ ನಿಮ್ಮ ಕೃತಜ್ನತೆ ತೋರಿಸಿ - ಗುರುಗಳ ಮಾರ್ಗದರ್ಶನ.

- ನವರತ್ನ ಸುಧೀರ್

ಬೆಂಗಳೂರಿನಲ್ಲಿ ನೆಲಸಿರುವ ಕೇರಳದ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿ ಸಂಘಗಳ ಒಕ್ಕೂಟ ಕಳೆದ ಭಾನುವಾರ ೨೫ ನವೆಂಬರ್ ೨೦೦೭ ರಂದು ತಮ್ಮ ವಾರ್ಷಿಕೋತ್ಸವವನ್ನು ಆಚರಿಸಿತು. ಸೆಂಟ್ರಲ್ ಕಾಲೇಜಿನ ಜ್ನಾನಜ್ಯೋತಿ ಸಭಾಂಗಣದಲ್ಲಿ ನಡೆದ ಈ ಸಮಾರಂಭಕ್ಕೆ ಆಹ್ವಾನಿತ ಬೆರಳೆಣಿಕೆಯ ಕನ್ನಡಿಗರಲ್ಲಿ ನಾನೂ ಒಬ್ಬನಾಗಿದ್ದೆ.

ಬರೀ ಮಲಯಾಳಿಗಳಿಂದ ಕಿಕ್ಕಿರಿದಿದ್ದ ಸಭಾಂಗಣ. ಹೆಂಗಸರು ಮಕ್ಕಳಾದಿಯಾಗಿ ಕುಟುಂಬದ ಎಲ್ಲ ಸದಸ್ಯರೂ ಇದ್ದದ್ದರಿಂದ ಸಾಕಷ್ಟು ಗದ್ದಲವಿತ್ತು.

ಅಂದಿನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಇಂಫೋಸಿಸ್‍ನ ಮುಖ್ಯಸ್ಥ ಶ್ರೀ. ಕ್ರಿಸ್ ಗೋಪಾಲಕ್ರಿಷ್ಣನ್. ಗೌರವ ಅತಿಥಿಗಳಾಗಿ “ಕಾರ್ಟ್‍ಮನ್” ಎಂದು ವಿಖ್ಯಾತರಾದ ಪ್ರೊ. ಎನ್. ಎಸ್. ರಾಮಸ್ವಾಮಿ ಹಾಗೂ ಅಂದಿನ ಮುಖ್ಯ ಸ್ಪಾನ್ಸರ್ ಶ್ರೀ. ಬಿಜು ಜಾನ್. ಎಲ್ಲರೂ ಯಶಸ್ವಿ ಮಲೆಯಾಳಿಗಳು ಮಾತ್ರ.

ನಿರ್ವಾಹಕರು ಕಾರ್ಯಕ್ರಮವನ್ನು ಮಲಯಾಳಿಯಲ್ಲಿಯೇ ಕಾಂಪೇರ್ ಮಾಡುತ್ತ ನಡೆಸಿಕೊಟ್ಟರೂ, ಸಂಘದ ಅಧ್ಯಕ್ಷ ,ಕಾರ್ಯದರ್ಶಿಗಳು ಮತ್ತು ಮುಖ್ಯ ಅತಿಥಿಗಳಾದ ಕ್ರಿಸ್ ಗೋಪಾಲಕೃಷ್ಣನ್ ಎಲ್ಲರೂ ಇಂಗ್ಲೀಷ್ನಲ್ಲೇ ಭಾಷಣ ಮಾಡಿದರು. ಸ್ವಲ್ಪ ಬೋರಾಗುವಂತಿದ್ದ ಭಾಷಣಗಳನ್ನು ಕೇಳಿ ಸಭಿಕರ ಗದ್ದಲ ಸ್ವಲ್ಪ ನಿಧಾನವಾಗಿ ಏರುವಂತಿತ್ತು.

ಪ್ರೊ. ರಾಮಸ್ವಾಮಿಯವರು ತಮ್ಮ ಭಾಷಣ ಮಾತ್ರ ಮಲಯಾಳಂನಲ್ಲಿಯೇ ಅರಂಭಿಸಿದರು. ನನಗೆ ಅವರ ಭಾಷಣ ನೂರಕ್ಕೆ ನೂರರಷ್ಟು ಅರ್ಥವಾಗದಿದ್ದರೂ, ಒಟ್ಟಾರೆ ಅದರ ಸಾರಂಶವೇನು ಅನ್ನುವುದು ಚೆನ್ನಾಗಿಯೇ ತಿಳಿದುಬಂತು. ಮಲೆಯಾಳಿಗಳು ಎಲ್ಲಿ ಹೋದರು ತಮ್ಮ ಜನರನ್ನು ಒಟ್ಟು ಗೂಡಿಸಿಕೊಳ್ಳುವ ಅಪ್ರತಿಮ ಸಂಘಟನಕಾರರು, ತಾವು ವಲಸೆ ಹೋದ ಬೇರೆ ರಾಜ್ಯ ಅಥವಾ ದೇಶಗಳನ್ನು ತಮ್ಮ ಕಾಯಕ ಕೌಶಲಗಳಿಂದ ಅಭಿವೃಧ್ಧಿ ಮತ್ತು ಉಧ್ಧಾರ ಮಾಡುತ್ತ ತಮ್ಮ ಹುಟ್ಟು ಕೇರಳವನ್ನು ಮಾತ್ರ ಪ್ರಗತಿಯ ಪಥದಲ್ಲಿ ದೂಕಿ “ಹಾಳು ಮಾಡದೆ” ಔದ್ಯೋಗಿಕವಾಗಿ ಹಾಗೂ ಅರ್ಥಿಕವಾಗಿಯೂ ಹಿಂದೆ ಇಟ್ಟಿರುವ ಮಹಾನ್‍ದೇಶಭಕ್ತರು ಎಂದು ಕುಚೋದ್ಯ ಮಾಡುತ್ತ ತಿಳಿಹಾಸ್ಯದ ನೆರವಿನಿಂದ ಸಭಿಕರ ಮನಸೆಳೆದರು ಪ್ರೊ. ರಾಮಸ್ವಾಮಿಯವರು. ಅವರ ಪ್ರತಿಯೊಂದು ಮಾತಿಗೂ ನಗುತ್ತಿದ್ದ ಮಲಯಾಳಿ ಇಂಜಿನಿಯರ್ ಸಮುದಾಯಕ್ಕೆ ಹಿತವಚನ ನೀಡುತ್ತಿದ್ದಂತೆಯೇ, “ಈ ಕನ್ನಡ ನಾಡಿನಲ್ಲಿ ನಡೆಯುತ್ತಿರುವ ವಾರ್ಷಿಕೋತ್ಸವಕ್ಕೆ ಕೇವಲ ಮಲಯಾಳೀ ಆತಿಥೇಯರನ್ನು ಮಾತ್ರ ಕರೆದು ಆದರಿಸಿದ್ದು ಸರಿಯಲ್ಲ. ನೀವುಗಳು ಇರುವ ನಾಡು ಕರ್ನಾಟಕ. ಕುಡಿಯುವ ನೀರು ಅಲ್ಲಿಯದು. ಕನ್ನಡಿಗರಿಗೆ ನಿಮ್ಮ ಕೃತಜ್ನತೆಯ ಕುರುಹಾಗಿ ಇಂತಹ ಸಮಾರಂಭಗಳಲ್ಲಿ ನೀವು ಹೆಚ್ಚಿನ ಸಂಖ್ಯೆಯಲ್ಲಿ ಯಶಸ್ವಿ ಕನ್ನಡಿಗರನ್ನು ಆಹ್ವಾನಿಸಿ ಆದರಿಸಬೇಕು” ಎಂದು ಮಾರ್ಗದರ್ಶನ ನೀಡಿದರು. “ಮುಂದಿನ ವರ್ಷ ನಾನು ಈ ವೇದಿಕೆಯ ಮೇಲೆ ಕೇವಲ ಕನ್ನಡಿಗ ದಿಗ್ಗಜಗಳನ್ನು ನೋಡುವಹಾಗಿರಬೇಕು” ಎಂದರು. ಬರೀ ಮಲೆಯಾಳಿಗಳೇ ತುಂಬಿದ್ದ ಆ ಸಭೆಯಲ್ಲಿ ತಮ್ಮವರಿಗೇ ನೀಡಿದ ಅವರ ಈ ಸಂದೇಶ ಹೃದಯಪೂರ್ವಕವಾಗಿ ಬಂದು ಅಸ್ವಾರ್ಥತೆಯಿಂದ ತುಂಬಿದ್ದಂತೆ ತೋರಿತು.

ಇವರ ನಂತರ ಮಾತಾನಾಡಿದ ಯುವ ಉದ್ಯಮಿ ಬಿಜು ಜಾನ್ ಕೂಡ ಎಲ್ಲರಿಗೂ ಕನ್ನಡ ಕಲೆತು, ಕನ್ನ್ನಡಿಗರೊಂದಿಗೆ ಬೆರೆತು ಇರುವ ಸಂದೇಶ ನೀಡಿದರು.

ಅಧಿಕಾರ ಮೋಹ- ದಾಹ, ವಚನಭ್ರಷ್ಟತೆ, ಅನೀತಿಯುತ ವಿದ್ಯಮಾನಗಳ ಬಗ್ಗೆಯೇ ಕೇಳುತ್ತಿರುವ ಈ ಕಿವಿಗಳಿಗೆ, ಕೃತಾರ್ಥಭಾವದ ಗುರು ಸಂದೇಶ ಕೇಳಿ ಈ ಜಗತ್ತಿನ ಭವಿಷ್ಯ ನಾನಂದುಕೊಂಡಷ್ಟು ಕರಾಳವಿಲ್ಲ ಅನಿಸಿತು.

“ಯಾದ್ ವಶೇಮ್” - ನೇಮಿಚಂದ್ರರ ನೂತನ ಕಾದಂಬರಿಯ ಪರಿಚಯ.

- ನವರತ್ನ ಸುಧೀರ್

ಇಪ್ಪತ್ತನೇ ಶತಮಾನದ ಚರಿತ್ರೆಯ ಒಂದುಘೋರ ಅಧ್ಯಾಯ ದ್ವಿತೀಯ ಮಹಾಯುಧ್ಧದ ಸಮಯದ ಜರ್ಮನಿಯಲ್ಲಿ ಹಿಟ್ಲರ್ ಮತ್ತು ಅವನ ನಾಜೀ ಬೆಂಬಲಿಗರಿಂದ ನಡೆದ ಅರವತ್ತು ಲಕ್ಷ ಯಹೂದಿಗಳ ನರಮೇಧ. ಈ “ಹಾಲೋಕಾಸ್ಟ್” ಮಹಾಪಾತಕದಲ್ಲಿ ಅಳಿದ ಲಕ್ಷಾಂತರ ಯಹೂದಿ ಹುತಾತ್ಮರ ಸ್ಮರಣೆ ಹಾಗೂ ಶ್ರಧ್ಧಾಂಜಲಿಯ ಸ್ಮಾರಕವಾಗಿ ಇಸ್ರೇಲ್ ಸರ್ಕಾರ ೧೯೫೩ ರಲ್ಲಿ “ಯಾದ್ ವಶೇಮ್” ಅನ್ನು ಸ್ಥಾಪಿಸಿತು.

“ಯಾದ್ ವಶೇಮ್” ಖ್ಯಾತ ಲೇಖಕಿ ನೇಮಿಚಂದ್ರರವರ ನವನೂತನ ಕಾದಂಬರಿಯ ಹೆಸರು ಕೂಡ. ಅವರ ಮೊದಲೆರಡು ಪುಸ್ತಕಗಳನ್ನು ಓದಿ ನಾನು ಕಳಿಸಿದ ಅಭಿನಂದನಾಪೂರ್ವಕ ಈ ಮೇಲ್ ಮೂಲಕ ಪರಿಚಿತರಾದ ಶ್ರೀಮತಿ ನೇಮಿಚಂದ್ರರವರು, ನಾನು ಕಳಿಸಿದ್ದ ದೀಪಾವಳಿ ಶುಭಾಶಯಕ್ಕೆ ಪ್ರತ್ಯುತ್ತರವಾಗಿ ತಮ್ಮ ಹೊಸ ಕಾದಂಬರಿಯ ಬಗ್ಗೆ ಬರೆದು ಅದನ್ನು ಓದಲು ಪ್ರೇರೇಪಿಸಿದರು.

ಹೋದ ವಾರ ಗಾಂಧೀಬಜಾರ್ ನಲ್ಲಿನ ಅಂಕಿತ ಪುಸ್ತಕದಂಗಡಿಯಲ್ಲಿ ಕೊಂಡುತಂದು ಇದೀಗ ಓದಿ ಮುಗಿಸಿದೆ. ನನ್ನ ಇತಿ ಮಿತಿಗಳ ಅರಿವಿರುವ ನಾನು ಈ ಕಾದಂಬರಿಯನ್ನು ವಿಶ್ಲೇಷಿಸಿ ವಿಮರ್ಶೆಮಾಡುವ ಸಾಹಸಕ್ಕೆ ಕೈ ಹಾಕಿಲ್ಲ. ಓದಿ ಮುಗಿದ ನಂತರ ನನ್ನ ಪ್ರಾಮಾಣಿಕ ಅನಿಸಿಕೆಗಳನ್ನು ಸಂಪದ ಸಮುದಾಯದಲ್ಲಿ ಹಂಚಿಕೊಳ್ಳುವ ಪ್ರಯತ್ನ ಈ ಕಿರುಲೇಖನ.

ಚಿಕ್ಕಂದಿನಿಂದಲೂ ದ್ವಿತೀಯ ಮಹಾಯುಧ್ಧ ಹಾಗೂ ಜರ್ಮನಿಯಲ್ಲಾದ ಹಾಲೋಕಾಸ್ಟ್ ಮಹಾಪಾತಕದ ಬಗ್ಗೆ ಬರೆಯಲ್ಪಟ್ಟ ಅನೇಕ ಪುಸ್ತಕ, ಕಾದಂಬರಿಗಳನ್ನು ಓದಿದ್ದೆ. ಎರಡೂ ವಿಶ್ವ ಸಮರಗಳಲ್ಲಿ ಬ್ರಿಟನ್‍ನ ಯುಧ್ಧಮಂತ್ರಿಯಾಗಿದ್ದ ಚರ್ಚಿಲ್‍ರ ದ್ವಿತೀಯ ಸಮರದ ಆರು ಹೊತ್ತಿಗೆಗಳಲ್ಲಿ ಪ್ರಕಟಿತ ಬರಹಗಳು, ಅಮೇರಿಕದ ಯಹೂದಿ ಮೂಲದ ಖ್ಯಾತ ಲೇಖಕರಾಗಿದ್ದ ಮ್ಯಾಕ್ಸ್ ಡಿಮಾಂಟ್, ಲಿಯಾನ್ ಉರಿಸ್‍ ಇತ್ಯಾದಿಯವರು ಬರೆದ ಪುಸ್ತಕಗಳು, ಕಾದಂಬರಿಗಳನ್ನು ಓದಿದ್ದ, ಮತ್ತು ಈ ವಿಷಯ ಕುರಿತ ಅನೇಕ ಚಲನಚಿತ್ರಗಳನ್ನು ನೋಡಿದ್ದ ನನಗೆ ಆಗ ನಡೆದಿದ್ದ ಘಟನೆಗಳ ಬಗ್ಗೆ ಒಂದು ನಿರ್ದಿಷ್ಟ ನಿಲುವು ರೂಪುಗೊಂಡಿತ್ತು. ಯಹೂದಿಗಳ ನಾಲ್ಕು ಸಾವಿರ ವರ್ಷಗಳ ಇತಿಹಾಸ, ಬೇರೆಯವರ ದಬ್ಬಾಳಿಕೆಯಲ್ಲಿ ಅವರು ಪಟ್ಟ ಕಷ್ಟ ಕಾರ್ಪಣ್ಯಗಳು, ಇವೆಲ್ಲವನ್ನೂ ದಿಟ್ಟತನದಿಂದ ಎದೆಗುಂದದೆ ಎದುರಿಸಿ ಕಾಪಾಡಿಕೊಂಡ ತಮ್ಮ ಸಂಸ್ಕಾರ, ಮತ್ತು ಸಂಸ್ಕೃತಿ, ಶತೃರಾಷ್ಟ್ರಗಳಿಂದ ಸುತ್ತುವರಿದ್ದಿದ್ದರೂ ಇಸ್ರೇಲ್ ದೇಶದ ನಾಗರಿಕರ ಅಸಾಮಾನ್ಯ ಧೈರ್ಯ, ಸ್ಥೈರ್ಯಗಳ ಬಗ್ಗೆ ಬಹಳ ಓದಿದ್ದ ನನಗೆ ಯಹೂದಿ ಜನಾಂಗದ ಬಗ್ಗೆ ಗೌರವಭಾವ ಬೆಳೆದಿತ್ತು. ಆದರೂ ಆಗಾಗ ಭಾವನಾತ್ಮಕವಾಗಿ ನನ್ನ ಮೇಲೆ ಯಹೂದಿಪರ ಏಕಪಕ್ಷೀಯ ಪರಿಣಾಮವಾಗಿದೆಯೇನೋ ಅಂತ ಅನಿಸಿದ್ದುಂಟು. ನನಗೆ ತಿಳಿದಂತೆ ಇದಕ್ಕೆ ವಿರುಧ್ಧ ದೃಷ್ಟಿಕೋಣವನ್ನು ಪ್ರತಿಪಾದಿಸುವ ಸಾಹಿತ್ಯ ಅಥವಾ ಮಾಧ್ಯಮ ಸಾಕಷ್ಟು ಇರಲಿಲ್ಲ ಅಥವಾ ಇದ್ದರೂ ಅಷ್ಟೊಂದು ಜನಜನಿತವಾಗಿರಲಿಲ್ಲ.

ಮೊದಲ ನೋಟಕ್ಕೆ, ಜೆರೂಸಲೆಂನ ಗೋಳುಗೋಡೆ ಮತ್ತು ಮಸೀದಿಯ ವರ್ಣಚಿತ್ರವಿರುವ ನೇಮಿಚಂದ್ರರ ಕಾದಂಬರಿಯ ಮುಖಪುಟ ಬಹಳ ಆಕರ್ಷಕವಾಗಿ ಕಂಡಿತು. ಅಚ್ಚುಕಟ್ಟಾದ ಮುದ್ರಣ. ಯುಧ್ಧ ಮುಗಿದ ಅರವತ್ತು ವರ್ಷಗಳ ನಂತರ ಬಹುಚರ್ಚಿತ ಹಾಲೋಕಾಸ್ಟ್ ಬಗ್ಗೆ ಬೆಂಗಳೂರಿನ ಈ ಇಂಜಿನಿಯರ್ ಲೇಖಕಿ ಅದೇನು ಹೊಸದಾಗಿ ಬರೆದಿರುತ್ತಾರೋ ನೋಡುವಾ ಎಂದು ಸ್ವಲ್ಪ ಸಂಶಯಪೂರಿತ ಕುತೂಹಲದಿಂದಲೆ ಓದಲಾರಂಭಿಸಿದೆ. ಮೊದಲ ಹತ್ತು ಹದಿನೈದು ಪುಟಗಳಲ್ಲೇ ಕಾದಂಬರಿ ನನ್ನನ್ನು ಸೆರೆಹಿಡಿಯಿತು. ನಮ್ಮ ಚಾಮರಾಜಪೇಟೆ, ಗೋರಿಪಾಳ್ಯ, ಸೌತ್ ಪರೇಡ್, ಕೋನೇನ ಅಗ್ರಹಾರಗಳಲ್ಲಿ ಶುರುವಾದ ಕಥೆ ಜರ್ಮನಿಯ ಡಕಾವ್, ಅಲ್ಲಿಂದ ಅಮೇರಿಕ, ಇಸ್ರೇಲ್‍ನ ಟೆಲ್ ಅವಿವ್ ಮತ್ತು ಜೆರೂಸಲೆಂ ಎಲ್ಲಾ ಸುತ್ತಿಕೊಂಡು ಮರಳಿ ಚಾಮರಾಜಪೇಟೆಯಲ್ಲಿಯೇ ಮುಕ್ತಾಯವಾಯಿತು. ಅಲ್ಲಲ್ಲಿಯೇ ಸೂಕ್ತವಾಗಿ ಮುದ್ರಿಸಿದ ಉಲ್ಲೇಖಿತ ಸ್ಥಳಗಳ, ಮನೆಗಳ ಕಪ್ಪು ಬಿಳುಪು ಛಾಯಾಚಿತ್ರಗಳ ನೆರವಿನಿಂದ ಮನಃಪಟಲದ ಮೇಲಣ ಚಲನಚಿತ್ರವಾಗಿ ತೋರತೊಡಗಿತು. ಅವರ ಸರಳ ಸುಂದರ ಕನ್ನಡ, ವಿವರಣಾ ಶೈಲಿ, ಕಥೆಯಲ್ಲಿ ಬಂದ ಆಕಸ್ಮಿಕ ತಿರುವುಗಳು, ಚಿರಪರಿಚಿತ ನಂಬಲರ್ಹ ಪಾತ್ರಗಳು, ನಲವತ್ತರಲ್ಲಿ ಬೆಳೆಯುತ್ತಿದ್ದ ಬೆಂಗಳೂರಿನ ಔದ್ಯೋಗಿಕ ಇತಿಹಾಸ, ಎಲ್ಲವನ್ನು ಚಾಣಾಕ್ಷತೆಯಿಂದ ಹೆಣೆದ ರೀತಿ ನಿಜಕ್ಕೂ ಪ್ರಶಂಶಾರ್ಹ. ನಾನು ಹಿಂದೆ ಓದಿದ್ದ ನೆವಿಲ್ ಶ್ಯೂಟ್ ಕಾದಂಬರಿಗಳಲ್ಲಿನ ಸಾಧಾರಣ ಭಾವೋದ್ವೇಗಗಳಿರುವ ಹುಲುಮಾನವ ಪಾತ್ರಗಳು ನೆನಪಿಗೆ ಬಂದವು. ಹಾಗೆಯೆ, ಫ್ರೆಡರಿಕ್ ಫೋರ್‍ಸೈಥ್‍ ಕಾದಂಬರಿಗಳಂತೆ ಕಾಲಚಕ್ರದಲ್ಲಿ ಹಿಂದಕ್ಕೂ ಮುಂದಕ್ಕೂ ಹೋಗಿಬರುತ್ತ ಕಥೆ ಈಗಿನ ಇಪ್ಪತ್ತೊಂದನೇ ಶತಮಾನಕ್ಕೆ ಬಂದು ಸೇರಿ ಈಗಿನ ವಿದ್ಯಮಾನಗಳನ್ನು ಆ ಹಳೆಯ ಇತಿಹಾಸದ ಬೆಳಕಿನಲ್ಲಿನೋಡುವ ಪ್ರಯತ್ನ ಮಾಡುತ್ತದೆ. ನಾನು ಕಾದಂಬರಿಯ ಕಥೆಯನ್ನು ಹೇಳಿ ಓದುಗರ ಸ್ವಾರಸ್ಯವನ್ನು ಕಡಿಮೆ ಮಾಡಬಯಸುವುದಿಲ್ಲ.

ನನಗೆ ಬಹಳ ಮೆಚ್ಚಿಗೆಯಾದ ಅಂಶ ಉತ್ತರಾರ್ಧದಲ್ಲಿ ಕಾದಂಬರಿಯ ನಾಯಿಕೆಯ ಮನಸ್ಸಿನಾಳದ ಚಿಂತನ. ಮೊದಮೊದಲು ವಿಧಿಯ ಹೊಡೆತಕ್ಕೆ ಸಿಕ್ಕಿ ದಿಕಾಪಾಲಾಗಿದ್ದ ಹೆಣ್ಣೊಬ್ಬಳು, ಹೊರದೇಶದಲ್ಲಿ ಕಷ್ಟದ ಕುಲುಮೆಯಲ್ಲಿ ಬೆಂದರೂ ಧೃತಿಗೆಡದೆ, ಸುತ್ತಲಿನವರ ನಿರಪೇಕ್ಷ, ನಿಷ್ಕಾಮ ಪ್ರೀತಿ ವಾತ್ಸಲ್ಯಗಳ ನೆರವಿನಿಂದ ತನ್ನತನ ಕಂಡುಕೊಳ್ಳುತ್ತಾಳೆ. ತನ್ನವರ ಬಗ್ಗೆ ಅಪಾರ ಪ್ರೀತಿ ಅನುಕಂಪ ಇದ್ದಾಗ್ಯೂ, ಯಾವ ಭಾವಾತ್ಮಕ ಒತ್ತಡಕ್ಕೂ ಈಡಾಗದೆ ಯಾವ ಒಂದು ಪೂರ್ವಗ್ರಹವಿಲ್ಲದೆ, ಏಕಪಕ್ಷೀಯವಾಗಿಲ್ಲದ ತಾರ್ಕಿಕವಾದ ಒಂದು ದಿಟ್ಟ ನಿಲುವು ತಳಿಯುತ್ತಾಳೆ. ಯಹೂದಿಯಾದರೂ ತನ್ನವರ ನಂಬಿಕೆ, ತಾತ್ವಿಕ ನಿಲುವು, ಬೇರೆಯವರ ಬಗ್ಗೆ ಅವರ ನಡತೆ, ವರ್ತನೆ, ಯಾವುದೂ ಪ್ರಶ್ನಾತೀತವಲ್ಲ ಅವಳಿಗೆ.

ನೇಮಿಚಂದ್ರರವರಿಗೆ ಇತಿಹಾಸ ಒಂದು ನೆಪಮಾತ್ರ. ಬೇರೆ ಅನೇಕ ಕಾದಂಬರಿಗಳಂತೆ ಯಾವುದೋ ಒಂದು ಜಾಡು ಹಿಡಿದು, ಕಾದಂಬರಿಕಾರರ ಪೂರ್ವಗ್ರಹಗಳನ್ನು ಓದುಗರ ಮೇಲೆ ಹೇರುವ ಪ್ರಯತ್ನವಿಲ್ಲ. ಓದುಗರನ್ನು ಸಕಾರಾತ್ಮಕವಾಗಿ ಚಿಂತಿಸಲು ಪ್ರಚೋದಿಸುವ ಪ್ರಾಮಾಣಿಕ ಪ್ರಯತ್ನ ಈ ಕಾದಂಬರಿಯದು ಅಂತ ನನ್ನ ಅನಿಸಿಕೆ.

ಕಥೆಯ ಬೆನ್ನು ಹತ್ತಿ ಇವರು ಮಾಡಿದ ಸಂಶೋಧನೆ, ಸ್ವಂತ ಹಣ ಖರ್ಚುಮಾಡಿ ಕಥೆ ನಡೆಯುವ ಬೇರೆ ಬೇರೆ ಖಂಡಗಳ ಪ್ರತಿಯೊಂದು ನಗರಗಳಿಗೂ, ಸ್ಥಳಗಳಿಗೂ ಭೇಟಿಯಿತ್ತು, ಅಲ್ಲಿಯ ಜನರನ್ನು ಹುಡುಕಿ ಸಂದರ್ಶಿಸಿ, ಅಂತರ್ಜಾಲದಲ್ಲಿ ತಡಕಾಡಿ, ಅನೇಕ ಪುಸ್ತಕ, ಹೊತ್ತಿಗೆಗಳನ್ನು ಓದಿ ಎಲ್ಲವೂ “ ಆಥೆಂಟಿಕ್” ಆಗಿರಬೇಕೆಂಬ ಹಟ ಸಾಧಿಸಿ ತೋರಿಸಿದ ಇವರ ಪ್ರಯತ್ನ ನಿಜಕ್ಕೂ ಅಚ್ಚರಿ ತರಿಸುವಂಥಾದ್ದು. ಎಚ್. ಎ. ಎಲ್ ನಲ್ಲಿ ಉನ್ನತ ಹುದ್ದೆಯಲ್ಲಿದ್ದುಕೊಂಡು, ಸಂಸಾರ ಮತ್ತು ವೃತ್ತಿಜೀವನದ ಸಾಮರಸ್ಯ ಕಾಪಾಡಿಕೊಳ್ಳುತ್ತ, ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಇವರ ಕಾರ್ಯ ಅಸಾಧಾರಣವಲ್ಲದೆ ಮತ್ತೇನು?

ನವಕರ್ನಾಟಕ ಪ್ರಕಾಶನದ ಈ ಕಾದಂಬರಿ ಓದಿ ನೋಡಿ ಅಂತ ಆಗ್ರಹಿಸಲು ನನಗೆ ಸ್ವಲ್ಪವೂ ಸಂಕೋಚವಿಲ್ಲ.


( ಮೇಲ್ಕಂಡ ಪುಸ್ತಕ ಪರಿಚಯ ಮೊದಲು ಬಾರಿ "ಸಂಪದ" -ಅಂತರ್ಜಾಲ -ಪತ್ರಿಕೆಯಲ್ಲಿ ೨೨-೧೨-೨೦೦೭ರಂದು ಪ್ರಕಟವಾಯಿತು. http://sampada.net/article/6756 )