Friday 26 October 2007

ಕನ್ನಡ ನಾಡು, ನುಡಿ , ಜನ, ಸಂಸ್ಕೃತಿ- ಪರಭಾಷೀಯರು ಏಕೆ ಗೌರವಿಸಬೇಕು?

ಕನ್ನಡಿಗರೂ ಅಂದಮೇಲೆ ಕನ್ನಡ ನಾಡು, ನುಡಿ, ಜನಗಳ ಬಗ್ಗೆ ಹೆಮ್ಮೆ, ಅಭಿಮಾನ, ಗೌರವ ಇವೆಲ್ಲವೂ ಇರಲೇಬೇಕು, ನಿಜ. ಆದರೆ ಇದನ್ನು ಯಾವ ರೀತಿ ಪ್ರದರ್ಶಿಸ ಬೇಕು ಅನ್ನೋ ಬಗ್ಗೆ ಇನ್ನೂ ಒಮ್ಮತ ಇದ್ದಂತಿಲ್ಲ.

ಬೇರೆಯವರು ನಮ್ಮ ನಾಡು ನುಡಿ ಸಂಸ್ಕೃತಿಯನ್ನು ಅಷ್ಟಾಗಿ ಗೌರವಿಸುತ್ತಿಲ್ಲ, ನಮ್ಮ ನಾಡಿನಲ್ಲಿ ನಾವೇ ಹೊರಗಿನವರಂತಾಗಿದ್ದೇವೆ ಅನ್ನೋ ದುಃಖ ನಮ್ಮಲ್ಲನೇಕರಿಗಿದೆ. ನಮ್ಮನ್ನು ಅನಾಗರೀಕರು ಅಸಂಸ್ಕೃತರೂ ಅಂತ ಅಂದುಕೊಂಡರೂ ಪರವಾಗಿಲ್ಲ ಪರಭಾಷೀಯರಿಗೆ ಕಡ್ಡಾಯವಾಗಿ ಕನ್ನಡ ಕಲಿಸಬೇಕು ಅಂತ ಹಲವರು. ಎಲ್ಲಾ ನಾಮಫಲಕಗಳೂ ಕನ್ನಡದಲ್ಲಿರಬೇಕು ಅಂತ ಹಲವರು. ಕನ್ನಡದ ಕವಿತೆಗಳಿರುವ ಟೀ ಶರ್ಟ್ ಹಾಕಿಕೊಂಡು ನಿಮ್ಮ ಕನ್ನಡ ಪ್ರೇಮ ಮೆರೆಯಿರಿ ಅಂತ ಇತರರು. ನಮ್ಮ ನಾಡಿನಲ್ಲೇ ನಮ್ಮ ನಾಡಿನ ನೆಲ, ಜಲ, ಗಾಳಿ, ಸವಲತ್ತುಗಳನ್ನು ಬಳಸಿಕೊಂಡು ಹೊರಗಿನಿಂದ ಬಂದು ವಲಸೆಯಾದ ಪರಭಾಷೀಯರು ನಮ್ಮ ಭಾಷೆ ಕಲಿಯದೆ ಅಗೌರವ ಸೂಚಿಸುತ್ತಿದ್ದಾರೆ ಅಂತ ಬೇರೆ ಕನ್ನಡ ಪ್ರಾಧೀಕಾರದ ಅಧ್ಯಕ್ಷ ಶ್ರೀ ಸಿದ್ದಲಿಂಗಯ್ಯನವರು ಇತ್ತೀಚೆಗೆ ಹೇಳಿಕೆಯೊಂದನ್ನಿತ್ತಿದ್ದಾರೆ. ನಮಗೆ ಬೇರೆಯವರು ಕನ್ನಡ ಕಲಿಯುವುದು ಮುಖ್ಯವೋ ಅಥವಾ ಅವರು ನಮ್ಮ ನಾಡು , ಜನ, ಭಾಷೆ ಮತ್ತು ಸಂಸ್ಕೃತಿಯನ್ನು ಗೌರವದಿಂದ ಕಾಣಬೇಕು ಅನ್ನುವುದು ಜಾಸ್ತಿ ಮುಖ್ಯವೋ ನಾವು ಮೊದಲು ನಿರ್ಧರಿಸಬೇಕು.

ಬರೀ ಕನ್ನಡ ಕಲಿತರೆ ಗೌರವ ಸೂಚಿಸಿದ ಹಾಗೆಯೇ? ನಮ್ಮ ನಾಡಿನ ಸಂಸ್ಕೃತಿಯ ಬಗ್ಗೆ ಗೌರವ ವ್ಯಕ್ತಪಡಿಸಲು ಬೇರಾವ ಅವಶ್ಯಕತೆಯೂ ಇಲ್ಲವೇ? ಹಾಗೆಯೇ ಗೌರವಭಾವವನ್ನು ಬಲವಂತವಾಗಿ ಹೇರಲಾದೀತೆ? ಇತ್ತೀಚೆಗೆ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ “ಲೀಡ್ ಇಂಡಿಯಾ” ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಬಂಗಾಲಿ ಯುವತಿಯೊಬ್ಬಳು ಬೆಂಗಳೂರಿಗೆ ತನ್ನದೇ ಆದ ವಿಶಿಷ್ಟ ಸಂಸ್ಕೃತಿಯೇ ಇಲ್ಲ ಅಂತ ಉಧ್ಧಟತನದಿಂದ ಹೇಳುವ ಧೈರ್ಯ ಮಾಡಿದ್ದು ಕನ್ನಡಿಗರ ಸಹಿಷ್ಣುತೆ ಮತ್ತು ಉದಾರತೆಯ ದುರುಪಯೋಗ ಪಡೆದಂತಲ್ಲವೇ? ಯಾರೂ ಇದನ್ನು ಪ್ರತಿಭಟಿಸಲಿಲ್ಲವೇಕೆ? ನಮ್ಮನ್ನು ನಾವೇ ಅದೆಷ್ಟು ಗೌರವಿಸುತ್ತೇವೆ, ನಮ್ಮ ಆತ್ಮಾಭಿಮಾನ ಅದೆಷ್ಟಿದೆ ಎಂದು ಹೊರಗಿನವರು ಛೇಡಿಸಿ, ಪ್ರಚೋದಿಸಿದರೂ ನಮ್ಮ ರಕ್ತ ಕುದಿಯದಷ್ಟು ನಿಸ್ತ್ರಾಣಿಗಳಗಿದ್ದೇವೆಯೇ ನಾವು? ಇದಕ್ಕೆಲ್ಲ ಉತ್ತರ ಬರೀ ಕಡ್ಡಾಯ ಕಲಿಕೆ , ಪ್ರತಿಭಟನೆ, ಕಪ್ಪುಬಾವುಟ ಪ್ರದರ್ಶನವೇ ಅಥವಾ ಬೇರಾವುದಾದರೂ ಮಾರ್ಗಗಳಿವೆಯೇ ಎಂದು ಯೋಚಿಸುವುದುಚಿತ.

ಒಂದು ನಗರದಲ್ಲಿ ಬೇರೆ ಬೇರೆ ಭಾಷೆಯ ಜನ ಒಟ್ಟಿಗೆ ಇರುವಾಗ, ಎಲ್ಲರೊಡನೆ ಸುಲಭವಾಗಿ ಕಲೆತು, ಬೆರತು ಸೌಹಾರ್ದತೆಯಿಂದ ಜೀವನ ನಡೆಸಲು ಸ್ಥಳೀಯ ಭಾಷೆ ಕಲೆಯುವುದು ಒಂದು ಹಂತದವರೆಗೂ ಅನುಕೂಲಕರ ನಿಜ. ಆದರೆ ಕಲಿಯಬೇಕೆ ಬೇಡವೇ ಅನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಅನುಭವದ ಮೇಲೆ ತಾನೆ ನಿರ್ಭರ? ನಮ್ಮ ಭಾರತೀಯರಲ್ಲಿ ಯಾವುದೇ ಭಾಷಾ ಜನಾಂಗಕ್ಕೆ ಸೀಮಿತವಲ್ಲದ ಒಂದು ರೀತಿಯ ghetto mentality ಇದೆ. ಇದರಿಂದ ಕಲ್ಕತ್ತದಲ್ಲಿ ಬಹುಪಾಲು ಕನ್ನಡಿಗರೂ ತಮಿಳರೂ, ತೆಲುಗರೆಲ್ಲರೂ ದಕ್ಷಿಣ ಕಲ್ಕತ್ತದ ಲೇಕ್ ಗಾರ್ಡೆನ್, ಗರಿಯಾಹಾಟ್ ಸುತ್ತ ಮುತ್ತವೇ ಸೇರಿಕೊಳ್ಳುತ್ತಾರೆ. ಬಂಗಾಳಿಗಳು ಜಾಸ್ತಿ ಇರುವ ಜಾಗಗಳಲ್ಲಿ ಅವರೊಡನೆ ಬೆರೆತು ಇರುವದು ಅಪರೂಪ. ಹಾಗೆಯೇ ಮುಂಬೈನಲ್ಲಿ ಮಾಟುಂಗಾ, ಸಯಾನ್, ಚೆಂಬೂರ್‍ಗಳಲ್ಲಿ ದಕ್ಷಿಣಭಾರತೀಯರ ಗುಂಪು. ದೆಹಲಿಯಲ್ಲಿ ಬಂಗಾಳಿಗಳು ಬಹುಸಂಖ್ಯೆಯಲ್ಲಿ ಚಿತ್ತರಂಜನ್ ಪಾರ್ಕ್‍ನಲ್ಲಿ ಕಾಣಬಹುದು. ಅದೇ ರೀತಿ ಬೆಂಗಳೂರಿನಲ್ಲಿಯೂ ಸಣ್ಣ ಸಣ್ಣ ಭಾಷಾ ಕ್ಷೇತ್ರಗಳಿವೆ. ಶಿವಾಜಿನಗರ ಅಥವಾ ಹಲಸೂರಿನಲ್ಲಿರುವ ತಮಿಳು ಭಾಷೀಯರು ದೈನಂದಿನ ಜೀವನದಲ್ಲಿ ಮುಕ್ಕಾಲು ಮೂರು ಪಾಲು ತಮಿಳಿನಲ್ಲೇ ವ್ಯವಹರಿಸಿ ಸುಲಲಿತ ಜೀವನ ನಡೆಸಬಹುದು. ಅವರೇಕೆ ಶ್ರಮವಹಿಸಿ ಕನ್ನಡ ಕಲಿಯಬೇಕು? ಕೇವಲ ಕನ್ನಡಕ್ಕೆ ಗೌರವ ಸೂಚಿಸಲೇ? ಇಲ್ಲಿಯವರು ಅಲ್ಲಿಗೆ ಹೋಗೋಲ್ಲ. ಹಾಗೆಯೇ ಅಲ್ಲಿಯವರು ಇಲ್ಲಿಗೆ ಬರೋಲ್ಲ. ನಿಮ್ಮ ಹಂಗು ನಮಗಿಲ್ಲ, ನಮ್ಮ ಹಂಗು ನಿಮಗೇಕೆ ಅಂತ ನಿರ್ಲಿಪ್ತ ಮನೋಭಾವ.

ಬೇರೆಯವರು ನಮ್ಮ ಮಾತೃಭಾಷೆಯಲ್ಲಿ ವ್ಯವಹರಿಸುತ್ತಿಲ್ಲ ಅನ್ನುವ ನೋವು ನಮ್ಮ ಕನ್ನಡಿಗರಿಗೆ ಮಾತ್ರವೇ ಅಥವಾ ಬೇರೆರಾಜ್ಯಗಳಲ್ಲೂ ಇಂತಹ ಸಮಸ್ಯೆಗಳಿವೆಯೇ?

ಕನ್ನಡಿಗರೂ ಸೇರಿದಂತೆ ಎಲ್ಲರಿಗೂ ಭಾಷೆಯ ಸಮಸ್ಯೆ ಅತಿ ಹೆಚ್ಚಾಗಿ ಎದುರಾಗುವದು ದ್ರಾವಿಡ ರಾಜ್ಯವಾದ ತಮಿಳುನಾಡಿನಲ್ಲಿ. ಬಹು ಪಾಲು ಜನರ ಮಾತೃಭಾಷೆಯಾದ ತಮಿಳಿನ ಹೆಗ್ಗಳಿಕೆಯ ಬಗ್ಗೆ ಸ್ಥಳೀಯರಿಗೆ ಸ್ವಲ್ಪವೂ ಸಂಶಯವಿಲ್ಲ. ಅಲ್ಲಿ ತಮಿಳಿನ ಸ್ಥಾನದ ಬಗ್ಗೆ ಯಾರೂ ಸೊಲ್ಲೆತ್ತುವಂತಿಲ್ಲ. ನಿಮಗೆ ಅಲ್ಲಿ ಇರಬೇಕಾದರೆ ತಮಿಳು ಕಲಿಯುವುದು ಅತಿ ಅವಶ್ಯಕ. ಅಲ್ಪಾವಧಿಯ ಪ್ರವಾಸಕ್ಕೆ ಹರಕು ಮುರಕು ಇಂಗ್ಲೀಷ್ ಕೂಡ ನಡೆಯುತ್ತದೆ. ಉತ್ತರಭಾರತದಲ್ಲೆಲ್ಲೂ ಹರಕು ಮುರಕು ಹಿಂದಿ ಅಥವಾ ಹಿಂದುಸ್ತಾನಿಯಿಂದ ಕೆಲಸ ಸಾಧಿಸಿಕೊಳ್ಳಬಹುದು.

ಮುಂಬೈನಲ್ಲಿ ಇರಬೇಕಾದರೆ ಮರಾಠಿ ಕಲಿಯಲೇಬೇಕಿಲ್ಲ. ಬೆಂಗಳೂರಿನಲ್ಲಿ ಹೇಗೆ ಕನ್ನಡಿಗರೋ ಹಾಗೆಯೇ ಮುಂಬೈನಲ್ಲಿ ಮರಾಠಿಗರು ಅಲ್ಪಸಂಖ್ಯಾತರು. ಅನೇಕ ದಶಕಗಳಿಂದ ದೇಶದ ವ್ಯಾವಹಾರಿಕ ರಾಜಧಾನಿಯಾಗಿದ್ದರಿಂದ ಶಿವ ಸೇನೆ ಅದೆಷ್ಟು ತಿಪ್ಪರಲಾಗ ಹಾಕಿದರೂ ಮರಾಠಿಗರ ಬೇಳೆ ಅಲ್ಲಿ ಅಷ್ಟು ಬೇಯದು. ಮುಂಬೈಗೆ ತನ್ನದೇ ಆದ ವಿಶಿಷ್ಟ ಸ್ಥಾನವಿದೆ. ನಿಜವಾಗಿಯೂ ಹೇಳಬೇಕೆಂದರೆ ಪುಣೆ ನಗರ ಮರಾಠಿ ಸಂಸ್ಕೃತಿಯ ನಿಜವಾದ ನೆಲೆ. ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿ. ಮರಾಠಿ ನಾಟಕ, ಸಾಹಿತ್ಯ, ಸಂಗೀತ, ಲಾವಣಿ, ಜಾನಪದದ ರುಚಿ ಬೇಕಾದರೆ ಹೋಗಬೇಕಾದ್ದು ಪುಣೆಗೆ ಮುಂಬೈಗಲ್ಲ.

ಬೆಂಗಳೂರಿನ ಸಮಸ್ಯೆ ಹೆಚ್ಚೂಕಡಿಮೆ ಮುಂಬೈನಂತೆಯೇ. ರಾಜಕಾರಣ ಮತ್ತು ಆಡಳಿತ ಹೊರತಾಗಿ ಬೇರೆಲ್ಲ ಮುಖ್ಯ ವಹಿವಾಟುಗಳೂ ವ್ಯವಹಾರಗಳೂ ಪರಭಾಷೀಯರ ಕೈಯಲ್ಲಿದೆ. ನಾವು ಹೆಸರಿಗೆ ಮಾತ್ರ ಆಳುವ ಜನರು. ಖಜಾನೆಯ ಬೀಗದಕೈ ಎಲ್ಲಾ ಬೇರೆಯವರ ಬಳಿಯಲ್ಲಿ. ಬೆಂಗಳೂರ ಹೊರತಾಗಿ ಮತ್ಯಾವ ದೊಡ್ಡ ನಗರವೂ ಕನ್ನಡ ಸಂಸ್ಕೃತಿಯ ಆಗರ ಎಂದು ಹೇಳಿಕೊಳ್ಳುವಷ್ಟು ಪ್ರಗತಿಸಿಲ್ಲ. ಇನ್ನು ನಮ್ಮ ಕನ್ನಡದ ರಾಜಕಾರಣಿಗಳು ತಮ್ಮ ಜವಾಬ್ದಾರಿಯನ್ನು ಅದೆಷ್ಟು ಸುಂದರವಾಗಿ ಗೌರವಯುತವಾಗಿ ನಿಭಾಯಿಸುತ್ತಿದ್ದಾರೆ ಎಂಬುದರ ಬಗ್ಗೆ ಹೆಚ್ಚಿಗೆ ಹೇಳುವುದು ಅನುಚಿತ.

ಪೂರ್ವದ ನಗರಿ ಕಲ್ಕತ್ತದಲ್ಲಿ ಬಂಗಾಲಿಗಳು ಬಹುಸಂಖ್ಯಾತರು ಆದ್ದರಿಂದ ಭಾಷಾ ಗೊಂದಲದ ಗೋಜಿಲ್ಲ. ಒಂದು ಕಾಲದಲ್ಲಿ ದೇಶಭಕ್ತಿ, ಸಾಹಿತ್ಯ, ಕಲೆ, ಬುಧ್ಧಿಮತ್ತೆ ಎಲ್ಲದರಲ್ಲೂ ಬಂಗಾಳದ ಜನ ಬಹಳ ಮುಂದೆ ಎಂಬ ಪ್ರತೀತಿ ಇತ್ತು. ಆದರೆ ಈಗಿನ ಕಥೆಯೇ ಬೇರೆ. ಶಶಿ ತರೂರ್ ತನ್ನ ’great Indian tale” ನಲ್ಲಿ ಭಾರತದ ಬಗ್ಗೆ ಬರೆದ “- a higly developed civilization in an advanced state of decay” ಅನ್ನುವ ಉಕ್ತಿ ಇಂದಿನ ಬಂಗಾಳಕ್ಕೂ ಅನ್ವಯಿಸುತ್ತೆ. ಬಂಗಾಳದ ರಾಜಧಾನಿ ಕಲ್ಕತ್ತ ಮತ್ತು ಕರ್ನಾಟಕದ ರಾಜಧಾನಿ ಬೆಂಗಳೂರನ್ನು ಹೋಲಿಸಿದರೆ, ಅನೇಕ ಸಾಮ್ಯತೆಗಳು ಕಂಡು ಬರುತ್ತೆ. ಅಲ್ಲಿಯೂ ಅನ್ಯ ಭಾಷೀಯರು ಬೇರೆ ಬೇರೆ ಸ್ವಯಂಕಲ್ಪಿತ ಪ್ರದೇಶಗಳಲ್ಲಿ ನಿಶ್ಚಿಂತರಾಗಿರುತ್ತಾರೆ. ಅಲ್ಲಿಯ ಸರ್ಕಾರದಲ್ಲಿಯೂ ಸ್ಥಳಿಯರೇ ಬಹುಸಂಖ್ಯಾತರು. ಸರ್ಕಾರದ ಕೆಲಸದಲ್ಲಿ ಇಲ್ಲಿಯಂತೆಯೇ ನಿಷ್ಕ್ರಿಯತೆ, ಭ್ರಷ್ಟಾಚಾರದ ಪಿಡುಗಿದೆ. ಸೋಮಾರಿಗಳು, ಪ್ರತಿಭಟನಾಪ್ರಸಕ್ತರು. ನಿರಾಸಕ್ತ ಬುಧ್ಧಿಜೀವಿಗಳು ಸುತ್ತ ಮುತ್ತಲಿನದೆಲ್ಲವನ್ನು ಉಪೇಕ್ಷಿಸುತ್ತ ದೂರದೆಲ್ಲಿಯದೋ ಸಮಸ್ಯೆಗಳ ಬಗ್ಗೆ ಗಾಢ ಚಿಂತನೆಮಾಡುತ್ತ ತಮ್ಮದೇ ಕನಸಿನ ಪ್ರಪಂಚದಲ್ಲಿ ವಿಹರಿಸುತ್ತಲಿರುವುದು, ಸರಿಯಾಗಿ ಓದಿಲ್ಲದ ಕೆಲಸ ಕಾರ್ಯವಿಲ್ಲದ ಯುವಕರು ಪುಂಡು ಪೋಕರಿ ಮಾಡುತ್ತ ಸ್ಥಳೀಯ ರಾಜಕಾರಣಿಗಳ ಪಗಡೆಕಾಯಿಗಳಾಗಿ ಯಾವ ರೀತಿಯ ಸಕಾರಾತ್ಮಕ ಕ್ರಿಯೆಗಳಲ್ಲೂ ಭಾಗವಹಿಸದಿರುವುದು. ನಗರದೆಲ್ಲೆಡೆ ಕೊಳಕು, ಮೂಲಭೂತ ಸೌಲಭ್ಯಗಳ ಕೊರತೆ, ಸ್ವಛ್ಛತೆಯ ಅಭಾವ, ಅನಿಯಂತ್ರಿತ ಸಾರಿಗೆ ವ್ಯವಸ್ಥೆ, ಬೆಳೆಯುತ್ತಿರುವ ಅಪರಾಧ , ದಿನನಿತ್ಯದ ಪ್ರತಿಭಟನೆ, ಹೊಡೆದಾಟ, ಕಪ್ಪು ಬಾವುಟ ಪ್ರದರ್ಶನ ಎಲ್ಲವೂ ಒಂದೇ ಬಗೆ. ಹೀಗೇ ಒಂದೇ ಎರಡೇ ಸಾಮ್ಯತೆಗಳು?

ಆದರೆ ಭಿನ್ನತೆಯಿರುವುದು ಒಂದು ಮುಖ್ಯ ವಿಷಯದಲ್ಲಿ. ಅಲ್ಲಿ ನಿಮಗಿಷ್ಟವಿಲ್ಲದಿದ್ದರೆ ಬಂಗಾಲಿ ಭಾಷೆ ಕಲಿಯಬೇಕಿಲ್ಲ. ನಿಮ್ಮನ್ನು ಯಾರೂ ಭಾಷೆ ಕಲಿಯಲು ಹೆದರಿಸಿ ಬೆದರಿಸಿ ಕಡ್ಡಾಯ ಮಾಡುವುದಿಲ್ಲ. ಪರಭಾಷೀಯರ ಬಗ್ಗೆ ಇಲ್ಲಿ ಕಾಣುವಷ್ಟು ಉದ್ರೇಕ, ಕೋಪ ತಾಪಗಳಿಲ್ಲ. ಬಂಗಾಲಿ ಭಾಷೆಯ ಬಗೆಗಾಗಲಿ, ಬೇರೆಯವರು ತಮ್ಮ ಸಂಸ್ಕೃತಿಗೆ ಬೆಲೆನೀಡುತ್ತಿಲ್ಲ ಎಂಬ ಅಳುಕಾಗಲಿ ಅಲ್ಲಿ ಕಾಣುವುದಿಲ್ಲ. ಆದರೂ ಬಹಳಷ್ಟು ಹೊರಗಿನ ಜನ ಬೇಗ ಬಂಗಾಲಿ ಕಲಿತು ಮಾತನಾಡುವಷ್ಟಂತೂ ಪ್ರಬುಧ್ಧರಾಗುತ್ತಾರೆ.

ಬಂಗಾಳದಲ್ಲಿ ಎಲ್ಲವೂ ಒಳ್ಳೆಯದು ಅಂತ ಹೇಳುತ್ತಿಲ್ಲ. ಆದರೆ ಒಳ್ಳೆಯದಿರುವುದನ್ನು ಮಾತ್ರ ನಾವು ಕಲಿಯಬಹುದಲ್ಲ!
ಅದೇಕೆ ಅಲ್ಲಿ ಹಾಗೆ. ನಮ್ಮಲ್ಲಿ ಏಕೆ ಹೀಗೆ? ಯೋಚಿಸಬೇಕಾದ ವಿಚಾರ.

ಅಲ್ಲಿಯ ಜನರಿಗೆ ತಮ್ಮ ಭಾಷೆ, ಸಂಸ್ಕೃತಿ, ಸಾಹಿತ್ಯ, ಕಲೆ ಇತ್ಯಾದಿಗಳ ಹಿರಿಮೆಯ ಬಗ್ಗೆ ಎಳ್ಳಷ್ಟೂ ಸಂಶಯವಿಲ್ಲ. ಸರ್ವೋತ್ಕೃಷ್ಟ ಸಂಸ್ಕೃತಿ ತಮ್ಮದು ಅನ್ನೋ ಅಹಂಭಾವ ಇದೆ ಅಂದರೂ ತಪ್ಪಾಗಲಾರದು. ಪ್ರತಿಯೊಂದು ಮನೆಯಲ್ಲೂ ಮಾತನಾಡುವ ಭಾಷೆ ಬಂಗಾಲಿ. ಮಕ್ಕಳೆಲ್ಲರಿಗೂ ಬಂಗಾಲಿ ಮಾಧ್ಯಮದಲ್ಲೇ ಪ್ರಾಥಮಿಕ ಶಿಕ್ಷಣ. ಕುಟುಂಬದ ಬಹುಪಾಲು ಸದಸ್ಯರು ಗಂಡಾಗಲಿ ಹೆಣ್ಣಾಗಲಿ ರಬೀಂದ್ರ ಸಂಗೀತ ಕಲಿತಿರುತ್ತಾರೆ. ಸಂಗೀತವಿಲ್ಲದಿದ್ದರೆ, ಚಿತ್ರಕಲೆ, ಶಿಲ್ಪ, ಸಾಹಿತ್ಯಾಭಿರುಚಿ ಹೀಗೆ ಏನಾದರೂ ಇದ್ದದ್ದೆ. ಹವ್ಯಾಸಿ ನಾಟಕರಂಗದಲ್ಲಿ ದಿನ ನಿತ್ಯ ನೂತನ ಪ್ರಯೋಗಗಳಾಗುತ್ತಿರುತ್ತವೆ. ಬಂಗಾಲಿ ಸಾಹಿತ್ಯದಲ್ಲಿ ಅನೇಕ ಕೃತಿಗಳು ಬಿಡುಗಡೆಯಾದರೂ ಓದುವರ ಸಂಖ್ಯೆ ಕಮ್ಮಿಯೇನೂ ಆಗುವುದಿಲ್ಲ. ಬಹುತೇಕ ಹಬ್ಬಗಳೆಲ್ಲವನ್ನು ಸಾಮೂಹಿಕವಾಗಿ ಆಚರಿಸುತ್ತ, ಆಚರಣೆಯ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ರಬೀಂದ್ರ ಸಂಗೀತ, ನೃತ್ಯ, ನಾಟಕಗಳಲ್ಲಿ ಮಕ್ಕಳಾದಿಯಾಗಿ ಪಾಲ್ಗೊಂಡು ತಮ್ಮ ನಾಡಿನ ಮತ್ತು ಭಾಷೆಯ ಹೆಗ್ಗಳಿಕೆ ತೋರಬಯಸುತ್ತಾರೆ. ಅವರ ಸಾಹಿತ್ಯ, ಸಂಗೀತ, ಕಲೆ ನಿಜಕ್ಕೂ ಹಿರಿಮೆಯುಳ್ಳದ್ದಾಗಿದ್ದು, ಯಾರಿಗೂ ತಮ್ಮ ಬಗ್ಗೆ ಕೀಳರಿಮೆ ಅನ್ನಿಸುವ ಸಮಸ್ಯೆಯೇ ಇಲ್ಲ. ಈ ಸಾಮೂಹಿಕ ಆಚರಣೆಯ ಕಾರಣ ಅವರಲ್ಲಿ ಪರಸ್ಪರ ಬಾಂಧವ್ಯ ಒಗ್ಗಟ್ಟು ಹೆಚ್ಚಿರುವುದು ಖಂಡಿತ. ಪರಭಾಷೀಯರು ಇದರಲ್ಲಿ ಪಾಲ್ಗೊಂಡರೇ ಇಲ್ಲವೇ ಎಂಬುದರ ಬಗ್ಗೆ ತಲೆ ಕೆಡಸಿಕೊಳ್ಳುವುದಿಲ್ಲ. ಪಾಲ್ಗೊಂಡರೆ ಮುಕ್ತ ಕಂಠದಿಂದ ಪ್ರಶಂಶಿಸುತ್ತಾರೆ. ಪಾಲ್ಗೊಳ್ಳದಿದ್ದರೆ ತೆಗಳುವುದಂತೂ ಇಲ್ಲ.

ಒಳ್ಳೆಯ ಕಥಾವಸ್ತು, ಉತ್ತಮ ಅಭಿನಯಗಳಿಂದ ಸಮೃಧ್ಧ ವಾದ ಅಲ್ಲಿಯ ಹಳೆಯ ಚಲನಚಿತ್ರಗಳ ಮತ್ತು ನಾಟಕಗಳ ಗುಣಮಟ್ಟ ಅದೆಷ್ಟು ಹೆಚ್ಚಿತ್ತೆಂದರೆ ಅವನ್ನು ನೋಡಿ ಅರ್ಥ ಮಾಡಿಕೊಳ್ಳಲೆಂದೇ ಅನೇಕರು ಬಂಗಾಲಿ ಕಲಿತದ್ದುಂಟು. ಸತ್ಯಜಿತ್ ರೇ, ರಿತ್ವಿಕ್ ಘಟಕ್, ತಪನ್ ಸಿನ್ಹಾ, ಮೃಣಾಳ್ ಸೇನ್, ಋತುಪರ್ಣ ಘೋಷ್ ಮುಂತಾದವರು ಅತ್ಯುತ್ತಮ ಚಲನ ಚಿತ್ರಗಳನ್ನು ನೀಡಿದ್ದಾರೆ.
( ಈತ್ತೀಚಿನ ವಿಷಯವೇನೋ ಸ್ವಲ್ಪ ಬೇರೆಯೇ ಆಗಿದೆ. ಅಲ್ಲಿಯೂ ಪ್ರೇಕ್ಷಕರ ಉತ್ಪ್ರೇಕ್ಷೆಯಿಂದಾಗಿ ಕೀಳು ಸಂಸ್ಕೃತಿಯ ಮೇಲುಗೈ ಆಗುತ್ತಿದೆ.)

ಮೇಲಿನ ಉದಾಹರಣೆಯಿಂದ ವಿದಿತವಾಗುವುದದೇನೆಂದರೆ, ಪರಭಾಷೀಯರು ಬಂಗಾಲಿಯನ್ನು ಕಲಿಯುವುದು ಯಾವ ಒತ್ತಾಯ ಹಾಗೂ ಕಡ್ಡಾಯದಿಂದಲೂ ಅಲ್ಲ. ಕೇವಲ ಆ ಭಾಷೆಯ ಮತ್ತು ಸಂಸ್ಕೃತಿಯ ಮೇಲಣ ಗೌರವದಿಂದ ಎನ್ನುವುದು.

ಹಾಗಿದ್ದರೆ ನಮ್ಮಲ್ಲೇನು ಕೊರತೆ? ನಮ್ಮ ಸಾಹಿತ್ಯ, ಸಂಸ್ಕೃತಿ, ಕಲೆ ಅವರದಷ್ಟು ಸಮೃಧ್ಧ ಹಾಗೂ ಶ್ರೀಮಂತವಲ್ಲವೇ?
ನಮ್ಮ ಸಾಹಿತ್ಯ, ಸಂಸ್ಕೃತಿಗಳಿಗೆ ಯಾವ ಕಮ್ಮಿಯೂ ಇಲ್ಲ. ಭಾರತದಲ್ಲೇ ಅತಿಹೆಚ್ಚು ಜ್ನಾನಪೀಠ ಪ್ರಶಸ್ತಿ ಗಳಿಸಿರುವ ಏಕೈಕ ಭಾಷಾ ಸಾಹಿತ್ಯ ಕನ್ನಡದ್ದು. ಕರ್ನಾಟಕ ಸಂಗೀತದ ಬುನಾದಿ ಹಾಕಿದ್ದು ಕನ್ನಡದ ಪುರಂದರದಾಸರು.

ಅಭಾವವಿರುವುದು ನಮ್ಮ ಕನ್ನಡಿಗರಲ್ಲಿ ಹಿರಿಮೆಯನ್ನು ಎತ್ತಿ ತೋರಿಸುವ ಪ್ರಜ್ನೆ, ಕೌಶಲ್ಯ ಮತ್ತು ಕ್ಷಮತೆಯದು. ನಮ್ಮ ದೈನಂದಿನ ಜೀವನದಲ್ಲಿ ನಮ್ಮದೇ ಸಂಸ್ಕೃತಿಯ ವಿಶಿಷ್ಟವಾದದ್ದೇನಾದರೂ ಬೇರೆಯವರು ಬೆರಗಾಗುವಂತೆ ಎತ್ತಿ ತೋರಿಸುತ್ತಿದ್ದೇವೆಯೇ ಎಂದು ಯೋಚಿಸಬೇಕು.

ನಮ್ಮಲ್ಲಿ ಹಬ್ಬಗಳನ್ನು ಆದಷ್ಟು ಮನೆಪೂರ್ತಿ ಮಾಡಿಕೊಂಡು ಕುಟುಂಬದವರಿಗೋ ಆಪ್ತ ಮಿತ್ರರಿಗೋ ಸೀಮಿತವಾಗಿಟ್ಟುಕೊಳ್ಳುವದು ಹೆಚ್ಚು. ಸಾರ್ವಜನಿಕ ಹಾಗೂ ಸಾಮೂಹಿಕ ಸಮಾರಂಭಗಳನ್ನು , ತಮ್ಮ ಸ್ವಾರ್ಥಕ್ಕಾಗಿ ಸ್ಥಳೀಯ ಪುಢಾರಿಗಳು ಉಪಯೋಗಿಸಿಕೊಂಡು ಅಲ್ಲಿ ಸಂಸ್ಕೃತಿಯ ಪ್ರದರ್ಶನಕ್ಕಿಂತ ರಾಜಕೀಯವೇ ಹೆಚ್ಚು. ಅಮಾಯಕ ನಿರುದ್ಯೋಗಿ ಯುವಕರನ್ನು ಉಪಯೋಗಿಸಿಕೊಳ್ಳುವ ಇಂಥ ಸಮಾರಂಭಗಳಲ್ಲಿ ಭಾಗವಹಿಸಲು ಸುಸಂಸ್ಕೃತ ಮರ್ಯಾದಸ್ಥ ಜನ ಮುಂದೆ ಬರುವುದೇ ಕಡಿಮೆ. ಇದರಿಂದಾಗಿ ಇಲ್ಲಿ ಜಾಸ್ತಿ ಪ್ರದರ್ಶನವಾಗುವದು ಕೀಳು ಮಟ್ಟದ ಸಿನಿಮಾ ಸಂಸ್ಕೃತಿ ಮಾತ್ರ.
ನಮ್ಮ ಜಾನಪದ ಸಂಸ್ಕೃತಿಯ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸುವಲ್ಲಿ ಸೃಜನ ಶೀಲತೆ ಹಾಗೂ ನಿರ್ವಹಣೆಯ ಗುಣಮೌಲ್ಯಗಳ ಕೊರತೆಯಿಂದ ಆ ಕಲೆ ಹಾಗೂ ಕಲಾವಿದರ ಅಭಿವೃಧ್ಧಿ ಸಮರ್ಪಕವಾಗಿಲ್ಲ. ಕಾರ್ಯಕ್ರಮಗಳನ್ನು ಸಾದರಪಡಿಸುವ ಕಲೆ ಇನ್ನೂ ಕರಗತವಾದಂತಿಲ್ಲ.
ಬೆಂಗಳೂರಿನ ಚಿತ್ರ ಕಲಾ ಪ್ರಪಂಚದಲ್ಲೂ ಪರಭಾಷೀಯರದೇ ಮೇಲುಗೈ. ಯಾವ ಗ್ಯಾಲರಿಗೆ ಭೇಟಿಯಿತ್ತರೂ, ಹೊರನಾಡಿನ ಕಲಾವಿದರೇ ಜಾಸ್ತಿ. ನಮ್ಮ ಕನ್ನಡದ ಕಲಾವಿದರೇಕೆ ಹೆಚ್ಚು ಸಂಖ್ಯೆಯಲ್ಲಿಲ್ಲ?
ಕರ್ನಾಟಕ ಶಾಸ್ತ್ರೀಯ ಸಂಗೀತದ ತವರು ಕರ್ನಾಟಕ. ಆದರೆ ಕನ್ನಡಿಗರಾದ ವಿದುಷಿ ವಿದ್ವಾಂಸರು ಈಗ ಬೆರಳೆಣಿಕೆಯಷ್ಟು.. ತಮಿಳುನಾಡಿನ ಕಲಾವಿದರು ನಮ್ಮ ಪುರಂದರ ದಾಸರ ಕೃತಿಗಳನ್ನು ತಪ್ಪು ತಪ್ಪಾಗಿ ಹಾಡುತ್ತ ಅವರ ಕೊಲೆ ಮಾಡುತ್ತಿದ್ದರೆ ಹೊಟ್ಟೆ ಉರಿಯೋಲ್ಲವೇ? ಅವರುಗಳ ಕಚೇರಿಗಳಿಗೆ ಹಣ ಕೊಟ್ಟು ಕಿಕ್ಕಿರಿದ ಜನಸಂದಣಿ. ನಮ್ಮವರೇ ಹಾಡಿದರೆ ಬಿಟ್ಟಿಯಾದರೂ ಕೇಳುವರಿರೋಲ್ಲ. ಇದಕ್ಕೇನು ಕಾರಣ ಅಂತ ತಿಳಿದವರು ಹೇಳಬೇಕಷ್ಟೆ.
ಅತಿರೇಕದ ಕ್ರೌರ್ಯ, ಅಶ್ಲೀಲತೆ, ಕೀಳುಮಟ್ಟದ ಹಾಸ್ಯ, ಹುರುಳಿಲ್ಲದ ಕಥಾವಸ್ತು, ಅಸಹ್ಯದ ಹಾಡುಗಳು ಎಂಬೆಲ್ಲ ಕಾರಣಗಳಿಂದಾಗಿ ನಮ್ಮಲ್ಲಿ ಎಷ್ಟೋ ಜನ ಕನ್ನಡದ ಚಲನಚಿತ್ರಗಳನ್ನು ನೋಡಹೋಗುವುದಿಲ್ಲ. ಇದೊಂದು ಬೀಜ ವೃಕ್ಷ ಸಮಸ್ಯೆ. ಎಲ್ಲಿಯವರೆಗೂ ಸುಸಂಸ್ಕೃತ ಪ್ರೇಕ್ಷಕವರ್ಗ ಉತ್ತಮ ದರ್ಜೆಯ ಚಿತ್ರಗಳಿಗಾಗಿ ಹಾತೊರೆಯುವುದಿಲ್ಲವೋ ಅಲ್ಲಿಯವರೆಗೆ ಒಳ್ಳೆಯ ಚಲನಚಿತ್ರಗಳೂ ತಯಾರಾಗುವುದಿಲ್ಲ. ಈ ಉದ್ಯಮದ ಆರೋಗ್ಯಕರ ಬೆಳವಣಿಗೆಗೆ ಬಹಳಷ್ಟು ಶ್ರಮಿಸಬೇಕಾಗಿದೆ.
ಅನೇಕ ಕನ್ನಡಿಗರ ಮನೆಗಳಲ್ಲಿ ಮಕ್ಕಳು ಕನ್ನಡ ಕಲಿಯದಿದ್ದರೂ ಸರಿಯೇ ಇಂಗ್ಲೀಷ್ ಮಾತ್ರ ಕಡ್ಡಾಯವಾಗಿ ಕಲಿಸುವುದುಂಟು. ಮಕ್ಕಳು ಬಿಡಿ ದೊಡ್ದವರೇ ಕನ್ನಡದ ಪುಸ್ತಕಗಳನ್ನು ಓದುವುದಿಲ್ಲ. ನೀವು ಅದೇನು ಓದುತ್ತೀರಿ ಎಂದರೆ ಇಂಗ್ಲೀಷ್ ಪುಸ್ತಕಗಳ ದೊಡ್ಡ ಪಟ್ಟಿಯೇ ಸಿಗುತ್ತೆ. ಇವೆಲ್ಲದರ ಜೊತೆಯಲ್ಲಿಯೇ ನಮ್ಮ ಮನೆಗಳಲ್ಲಿ ನಮ್ಮ ಮಕ್ಕಳೊಂದಿಗೆ ಕನ್ನಡದಲ್ಲೇ ಮಾತನಾಡಿಸಿ, ಒಳ್ಳೆಯ ಸಾಹಿತ್ಯ ಓದಲು ಪ್ರೇರೇಪಿಸಿ ಕನ್ನಡದ ಬಗ್ಗೆ ಅಭಿಮಾನ ಬೆಳಸುವುದು ಬಹುಮುಖ್ಯ. ಈಚೆಗೆ ಪ್ರಕಟವಾಗುತ್ತಿರುವ ಕನ್ನಡ ಪುಸ್ತಕಗಳ ಗುಣಮಟ್ಟ ಮೊದಲಿಗಿಂತ ಅನೇಕ ಪಟ್ಟು ಹೆಚ್ಚಿವೆ. ಓದುಗರ ಅಭಾವವೊಂದೇ ಸಮಸ್ಯೆ.
ಕನ್ನಡಿಗರು ಹಣಕೊಟ್ಟು ಪ್ರೋತ್ಸಾಹಿಸಿ ಸದಭಿರುಚಿಯ ರಂಗಭೂಮಿಯ ಬೆಳವಣಿಗೆಗೆ ಮತ್ತು ಹೊಸ ನಾಟಕಗಳ ಪ್ರಯೋಗಗಳಿಗೆ ಕಾರಣವಾಗಬೇಕು. ಹವ್ಯಾಸಿ ರಂಗಭೂಮಿಗೆ ಯುವಕರನ್ನು ಆಕರ್ಷಿಸುವಲ್ಲಿ ಮತ್ತಿಷ್ಟು ಪ್ರಯತ್ನವಾಗಬೇಕಿದೆ.
ನಮ್ಮ ಟಿ. ವಿ ಮತ್ತು ರೇಡಿಯೊ ಮಾಧ್ಯಮಗಳಲ್ಲಿ ಉತ್ತಮ ಅಭಿರುಚಿಯ ಕಾರ್ಯಕ್ರಮಗಳನ್ನು ರೂಪಿಸಿ ಉತ್ತಮ ರೀತಿಯಲ್ಲಿ ಪ್ರಸ್ತುತ ಪಡಿಸಬೇಕು. ಸಾಹಿತ್ಯ ಶುಧ್ಧತೆ ಹಾಗೂ ಭಾಷಾ ಶುಧ್ಧಿಯ ಕಡೆಗೆ ಹೆಚ್ಚು ಗಮನ ಕೊಡಬೇಕು. ಕ್ವಾಂಟಿಟಿಗಿಂತ ಕ್ವಾಲಿಟಿ ಮುಖ್ಯ ಅನ್ನುವುದನ್ನು ಮರೆಯಬಾರದು. ಈ ದಿಕ್ಕಿನಲ್ಲಿ ನಮ್ಮ ಕಲಾವಿದರ ಹಲವು ಪ್ರಯತ್ನಗಳು ಶ್ಲಾಘನೀಯ. ಆದರೆ ಬಹುಪಾಲು ಕಾರ್ಯಕ್ರಮಗಳು ಕಳಪೆ ಮಟ್ಟದ್ದಾಗಿವೆ.

ಹೀಗೆ ನಮ್ಮ ಸಂಸ್ಕೃತಿಯನ್ನು ನಾವೇ ಸರಿಯಾಗಿ ಪ್ರತಿಬಿಂಬಿಸದಿರುವಾಗ ಪರಭಾಷೀಯರು ಅದನ್ನು ಆದರಿಸಿ ಗೌರವಿಸಿಲ್ಲ ಎಂದು ಅತ್ತರೇನು ಫಲ?

ಎಲ್ಲಕ್ಕಿಂತ ಹೆಚ್ಚಾಗಿ, ಕನ್ನಡಿಗರು ತಮ್ಮ ಹಬ್ಬ, ಹರಿದಿನ ಸಮಾರಂಭಗಳಲ್ಲಿ ಪರಭಾಷೀಯರನ್ನು ಆಮಂತ್ರಿಸಿ, ನಮ್ಮ ಭಾಷೆ, ಸಾಹಿತ್ಯ, ನಮ್ಮ ಜಾನಪದ, ನಮ್ಮ ಅಡಿಗೆಯ ಬಗ್ಗೆ ಪರಿಚಯಮಾಡಿಕೊಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಪರಸ್ಪರ ಸೌಹಾರ್ದತೆ ಹೆಚ್ಚಿ ನಮ್ಮ ಭಾಷೆಯನ್ನು ಅವರು ತಾವಾಗಿಯೇ ಕಲಿಯಬೇಕೆಂದು ಅನ್ನಿಸಬಹುದು. ಈಗ ಬೆಂಗಳೂರಿನಲ್ಲಿರುವ ಅನೇಕ ಭಾಷೀಯ ಹಾಗೂ ಸಾಂಸ್ಕೃತಿಕ ಪ್ರಪಂಚಗಳು overlap ಆಗಿ “cross cultural influences” ಹೆಚ್ಚುವುದಲ್ಲವೇ? ಹಾಗೆಯೇ ಅವರೇನಾದರೂ ಸ್ಪಂದಿಸಿ ತಮ್ಮ ಸಂಸ್ಕೃತಿಯನ್ನು ನಮಗೆ ಪರಿಚಯ ಮಾಡಿಸಿ ಕೊಟ್ಟರೆ ಜೀವನ ಇನ್ನೂ ವೈವಿಧ್ಯಮಯವಾಗುವ ಸಾಧ್ಯತೆ ಇದೆ!

ಪ್ರತಿಭಟನೆ, ಕಡ್ದಾಯ ಇತ್ಯಾದಿ ಯೋಜನೆಗಳಿಗಿಂತ, ನಮ್ಮ ಸಮಾಜ ಮತ್ತು ಸಂಸ್ಕೃತಿಯನ್ನು ಉತ್ತಮವಾಗಿ ಬಿಂಬಿಸುವ ಸಕಾರಾತ್ಮಕವಾದ ಕಾರ್ಯಕ್ರಮಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡರೆ ಕನ್ನಡದ ಉಧ್ಧಾರ ಖಂಡಿತ ಅಂತ ನನ್ನ ಅನಿಸಿಕೆ. ನೀವೇನಂತೀರಾ!

******************************************************
An abridged version of this article had been published on 24-10-2007 by thatskannada.com
http://thatskannada.oneindia.in/literature/my_karnataka/2007/2410-kannada-multi-lingual-setup.html

Friday 12 October 2007

"ಮಂಥನ" ದ ಬಗ್ಗೆ ಸ್ವಲ್ಪ ಚಿಂತನ!

ಬೆಂಗಳೂರಿನಿಂದ ಬಹಳ ವರ್ಷ ಹೊರಗಿದ್ದ ನನಗೆ ಕನ್ನಡ ಟಿ.ವಿ. ಸೀರಿಯಲ್‍ಗಳನ್ನು ನೋಡುವ ಅಭ್ಯಾಸವಿರಲಿಲ್ಲ. ಇತ್ತೀಚೆಗೆ ನಿವೃತ್ತ್ತ್ತನಾದ ಮೇಲೆ ಬಹಳ ಜನರ ಪ್ರಶಂಸೆ ಕೇಳಿ ಈ ಟೀವಿಯಲ್ಲಿ ಬರೋ “ಮಂಥನ” ದ ಕೆಲವು ಎಪಿಸೋಡ್‍ಗಳನ್ನು ನೋಡಿದೆ. ಹಿಂದಿನಿಂದಲೂ ನಾಟಕದ ಗೀಳು ಬೆಳೆಸಿಕೊಂಡಿದ್ದರಿಂದ ಸ್ವಾಭಾವಿಕವಾಗಿಯೆ ನನ್ನ ಮನಸ್ಸು ನಾಟಕದ ವಿಮರ್ಶೆ ಮಾಡತೊಡಗಿತು. ಮೇಲ್ನೋಟಕ್ಕೆ ನನಗೆ ಅನಿಸಿದ್ದನ್ನು ನಿಮ್ಮಲ್ಲಿ ಹಂಚಿಕೊಳ್ಳುವ ಪ್ರಯತ್ನ ಇದು.

ಮೊದಲು ಪ್ರಸಾರವಾಗುತ್ತಿದ್ದ ಬಹಳ ಅತಿರೇಕದ ನಾಟಕೀಯತೆ ಹಾಗೂ ಅತಿಶಯೋಕ್ತಿಗಳಿಂದ ತುಂಬಿದ ಅನೇಕ melodramatic ಸೀರಿಯಲ್‍ಗಳಿಗೆ ಹೋಲಿಸಿದರೆ ಈ ನಾಟಕದ ಗುಣ ಮೌಲ್ಯಗಳು ಬಹಳ ಉತ್ತಮ ಅಂತನೇ ನಿರ್ಣಯಿಸಬೇಕು. ನಿಜವಾಗಿಯೂ ಶ್ರೀ ಸೇತುರಾಮ್‍ರವರು ನಮ್ಮ ಸುತ್ತ ಮುತ್ತಲಿನ ಆಗು ಹೋಗುಗಳ ನೋವು ನಲಿವುಗಳ ಬಗ್ಗೆ ಚಿಂತನೆಯೇನೋ ಬಹಳ ಚೆನ್ನಾಗಿ ಮಾಡಿ ವಿಶ್ಲೇಷಿಸಿದ್ದಾರೆ. ಆದರೆ ಅವರ ಪಾತ್ರಗಳ ಬಾಯಿಯಲ್ಲಿ ಬರುವ ಸತ್ಯವಚನಗಳು ಎಷ್ಟೇ ನಿಜ ಅನಿಸಿದರೂ ಸ್ವಾಭಾವಿಕ ಅಥವಾ ಸಹಜ ಅನ್ನಿಸಲಿಲ್ಲ.

ನಿಜವಾಗಿಯೂ ಜನರು ತಮ್ಮ ಮನಸ್ಸಿನಾಳದಲ್ಲಿನ ಅವ್ಯಕ್ತ ತುಮುಲ, ತಳಮಳ, ಭೀತಿ, ಆನಂದ ಇವುಗಳೆಲ್ಲವನ್ನೂ ಮಂಥನದಲ್ಲಿ ತೋರಿಸಿದಷ್ಟು ಸುಲಭವಾಗಿ ಸಂಭಾಷಿಸಿ ವ್ಯಕ್ತಪಡಿಸಬಹುದಾದ, ಹಾಗೆಯೇ ಉದ್ದೇಶಿತ ವ್ಯಕ್ತಿ ಕೂಡ ಅಷ್ಟೇ ಸಂಯಮದಿಂದ ಅವರ ಮಾತನ್ನು ಅಡ್ಡ ಹಾಕದೇ ಪೂರ್ತಿ ಕೇಳಿ ಉದ್ರೇಕಿತರಾಗದೆ ಪ್ರತಿಯೊಂದು ಸವಾಲಿಗೂ ಸರಿಯಾಗಿ ಪ್ರತಿಕ್ರಯಿಸುವ, ಮತ್ತೆ ತಾಳ್ಮೆಯಿಂದ ಅವರ ಪ್ರತಿಕ್ರಿಯೆಗೆ ಕಾಯುವ ಸಂಭಾವಿತ ನಡುವಳಿಕೆ ಬಹಳ ಅಸ್ವಾಭಾವಿಕ ಅನ್ನಿಸೋಲ್ಲವೆ? ಬೇರೆಯವರ ಮಾತನ್ನು ಪೂರ್ತಿ ಕೇಳದೇ, ಮನಸ್ಸಿನಲ್ಲಿ ಪೂರ್ವಾಗ್ರಹ ಪೀಡಿತರಾಗಿ ಏನನ್ನೋ ಅರ್ಥಯಿಸಿ, ಅಡ್ಡ ಬಾಯಿ ಹಾಕಿ ತಾಳ್ಮೆಯಿಲ್ಲದೆ ಬಡಬಡಿಸುವುದರಿಂದ ತಾನೇ ಜೀವನ ಇದಿಷ್ಟು unpredictable ಆಗಿರುವುದು. ನಿಜ ಜೀವನದಲ್ಲಿ ಇಷ್ಟು ಸಂಯಮ, ಶಿಸ್ತಿನ ಸಂಭಾವಿತ ನಡುವಳಿಕೆ ಇದ್ದಿದ್ದರೆ ಇಷ್ಟೊಂದು ಅನಿಶ್ಚಿತತೆ ಹಾಗೂ ವೈವಿಧ್ಯತೆ ಇರಲು ಸಾಧ್ಯವಿತ್ತೇ?

Melodrama ಬೇಡ ನಿಜ. ಆದರೂ dramatic‍ ಆಗಿ ಇರಬೇಡವೇ? ಬಹಳ ಉತ್ತಮ ನಟವರ್ಗವಿದ್ದೂ Zombieಗಳ ಹಾಗೆ ನಟಿಸಿದ್ದು ಅದೇನೋ ವಿಚಿತ್ರವಾಗಿತ್ತು. ರೆಡ್ಡಿಯ ಪಾತ್ರ ಮಾತ್ರ ಲವಲವಿಕೆಯಿಂದ ಮೂಡಿಬಂದಿದೆ ಅನ್ನಿಸಿತು. ತಾಯಿ, ಮಗಳು ತೋರಿಸುವ composure, cold blooded ಸೊಸೆಯ ಬಾಯಲ್ಲಿ ಬರುವ ಮಾತುಗಳು ಬಹಳ ಕೃತಕವಾಗಿ ತೋರಿಬಂತು.

ನಮ್ಮ ಆಪ್ತರು , ಮಿತ್ರರೂ ಕೂಡ ಹೀಗೆಯೆ ವರ್ತಿಸಿದರೆ ಜೀವನ ಅದೆಷ್ಟು ನೀರಸವಲ್ಲವೇ? ನೀವೇನಂತೀರಿ?

Wednesday 3 October 2007

ನಮ್ಮ ನಾಟ್ಕದ್ ಮೇಷ್ಟ್ರು - ನಾರಾಯಣ ರಾವ್

ಸೆಪ್ಟೆಂಬರ್ ೨೫ನೇ ತಾರೀಖು ನಮ್ಮ ನಾಟ್ಕದ್ ಮೇಷ್ಟ್ರಾಗಿದ್ದ ಬಿ.ಎಸ್.ನಾರಾಯಣ ರಾವ್‍ರ ಜನ್ಮದಿನ ಅಂತ ನನಗೆ ಅರಿವಾದದ್ದು ಬೆಳಿಗ್ಗೆ ಕಾಫಿ ಕುಡಿಯುವಾಗ “ ವಿಜಯ ಕರ್ನಾಟಕ” ದಲ್ಲಿ ವೈ. ಎನ್. ಗುಂಡೂರಾಯರ “ ಈ ದಿನ - ಈ ಜನ” ಅಂಕಣ ಓದಿದಾಗ.

ಅವರ ಕಿರು ಲೇಖನ ಓದುತ್ತಿದ್ದಂತೆಯೇ ಕಳೆದ ಐವತ್ತು ವರ್ಷಗಳ ನೆನಪಿನ ಸುರಳಿಗಳು ಒಂದೊಂದಾಗಿ ತೆರೆದುಕೊಂಡವು.

೧೯೭೨ರಲ್ಲೇ ಉದರನಿಮಿತ್ತ ಬೆಂಗಳೂರು ಬಿಡಬೇಕಾದ ನನಗೆ ರಾಯರ ಜೊತೆಗೆ ಎಲ್ಲ ಸಂಬಂಧಗಳೂ ಕಡಿದುಹೋಗಿತ್ತು. ಸೇವಾನಿವೃತ್ತನಾಗಿ ಇತ್ತೀಚೆಗೆ ಬೆಂಗಳೂರಿಗೆ ಹಿಂತಿರುಗಿದ ನನಗೆ ಹಳೆಯ ನೆನಪುಗಳು ಮರುಕಳಿಸಿ ರಾಯರ ಬಗ್ಗೆ ತಿಳಿಯುವ ತವಕವಿತ್ತು. ಆದರೆ ಯಾರೊಬ್ಬ ಹಳೆಯ ಸ್ನೇಹಿತರೂ ಪತ್ತೆಯಾಗಲಿಲ್ಲ. ಅಂತರ್ಜಾಲದಲ್ಲಿ ತಡಕಾಡಿದರೂ ಎಲ್ಲಿಯೂ ಅವರ ಬಗ್ಗೆ ಸೊಲ್ಲಿಲ್ಲ. ಹವ್ಯಾಸಿ ಕನ್ನಡ ರಂಗಭೂಮಿಯ ಬೆಳವಣಿಗೆಯ ಕುರಿತ ಲೇಖನಗಳಲ್ಲೂ ನಾರಾಯಣ ರಾಯರ ಬಗ್ಗೆ ಯಾವೊಂದು ಉಲ್ಲೇಖ ಕಾಣಿಸಲಿಲ್ಲ. ಬಹಳ ಖೇದವಾಗಿತ್ತು. ಆದರೆ ಶ್ರೀ ಗುಂಡೂರಾಯರ ಲೇಖನ ಬಹಳ ಸಂತಸ ತಂದಿತು. ಕೈಲಾಸಂರಂತಹವರನ್ನು ನಮಗೆ ಪರಿಚಯಿಸಿದ ವ್ಯಕ್ತಿಯೊಬ್ಬರನ್ನು ಜ್ನಾಪಿಸಿಕೊಳ್ಳುವುದೇ ಒಂದು ರೀತಿಯ ಮಜಾ.

ಬಸವನಗುಡಿಯಲ್ಲಿ ವಾಸಿಸುತ್ತಿದ್ದ ನನಗೆ ನಾರಾಯಣ ರಾಯರ ಪರಿಚಯವಾದದ್ದು ೧೯೫೮ ರಲ್ಲಿ. ಅವರು ಆಗ ಗಾಂಧೀಬಜಾರಿನಲ್ಲಿ ತಮ್ಮ ಹಿರಿಯ ಮಗನ ಹೆಸರಿಸಿದ ಪ್ರಕಾಶ್ ಪ್ರಿಂಟರ್ಸ್ ಎಂಬ ಒಂದು ಸಣ್ಣ ಮುದ್ರಣಾಲಯವನ್ನು ನಡೆಸುತ್ತಿದ್ದರು. ನಮ್ಮ ತಂದೆಯ ಬಾಲ್ಯ ಸ್ನೇಹಿತರೂ ಹಾಗೂ ಸಹಪಾಠಿಗಳೂ ಆಗಿದ್ದರಿಂದ ಆಗಾಗ ಅವರನ್ನು ನೋಡುವ ಸಂದರ್ಭ ಒದಗಿಬರುತ್ತಿತ್ತು. ಬ್ಯೂಗಲ್ ರಾಕ್‍ನ ಬಂಡೆಗಳ ನಡುವೆ ಆಗ ಇದ್ದ ಸಣ್ಣ ಮೈದಾನದಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ಸೇವಾದಳದ ಸದಸ್ಯನಾದಮೇಲಂತೂ ಅವರನ್ನು ಇನ್ನೂ ಹತ್ತಿರದಿಂದ ಅರಿಯುವ ಯೋಗವಾಯಿತು. ರಾಷ್ತ್ರೀಯ ಸೇವಾದಳದಲ್ಲಿ ನನ್ನ ಹಿರಿಯ ಸ್ನೇಹಿತ ಕಾನಕಾನ್ ಹಳ್ಳಿ ಗೋಪಿಯ ನೇತೃತ್ವದಲ್ಲಿ ನಾವು ಹಳ್ಳಿಯ ಕೋಲಾಟದ ತಂಡವೊಂದನ್ನು ಕಟ್ಟಿಕೊಂಡಿದ್ದೆವು. ಸೇವಾದಳಕ್ಕೂ ಪೋಲಿಸ್ ಸ್ಟೇಷನ್ ರಸ್ತೆಯ ಮನೆಯೊಂದರ ಮೇಲಿನ ಕೋಣೆಯಲ್ಲಿ ರಿಹರ್ಸಲ್‍ಗಾಗಿ ಸೇರುತ್ತಿದ್ದ ರವಿ ಕಲಾವಿದರ ತಂಡಕ್ಕೂ ಗಾಢ ಸಂಬಂಧವಿತ್ತು. ಒಂದು ಗೋಪಿ ಅಲ್ಲಿಯ ಸಕ್ರಿಯ ಸದಸ್ಯರಾಗಿ ಇದ್ದದ್ದು. ಮತ್ತೊಂದು ಅಲ್ಲಿಯ ನಾಟಕಗಳಿಗೆ ಬೇಕಾದ ಸಣ್ಣ ಹುಡುಗರ ಪಾತ್ರಗಳಿಗೆ ಸೇವಾದಳ ಒಂದು ಕ್ಯಾಪ್ಟಿವ್ ಸೋರ್ಸ್. ಪಂಚವಾರ್ಷಿಕ ಯೋಜನೆಯ ಪಬ್ಲಿಸಿಟಿಗಾಗಿ ಕೇಂದ್ರ ಸರ್ಕಾರದ ಸಾಂಗ್ ಅಂಡ್ ಡ್ರಾಮಾ ವಿಭಾಗದ ವತಿಯಿಂದ ರವಿ ಕಲಾವಿದರು ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿ ಆಡುತ್ತಿದ್ದ ’ಜಾಗೃತ ಭಾರತಿ” ; ’ನಮ್‍ಹಳ್ಳಿ” ನಾಟಕಗಳಲ್ಲೆಲ್ಲ ಹೇಗಾದರೂ ಮಾಡಿ ನಮ್ಮ ಕೋಲಾಟವನ್ನು ಸೇರಿಸಲಾಗುತ್ತಿತ್ತು. ರವಿ ಕಲಾವಿದರ ನಾಟಕಗಳಲ್ಲೆಲ್ಲ ನಿರ್ದೇಶನದ ಹೊಣೆ ನಾರಾಯಣ ರಾಯರದು. ಸತಃ ಬಹಳ ಉತ್ತಮ ನಟರಾಗಿದ್ದಲ್ಲದೆ, ಎಂಥವರನ್ನು ಕೂಡ ನಿರ್ದೇಶಿಸಿ ಅವರಿಂದ ಉತ್ತಮ ಅಭಿನಯ ಮಾಡಿಸುವ ಚಾತುರ್ಯ ಅವರಿಗಿತ್ತು. ಹೀಗಾಗಿ ಆರಂಭವಾದ ನನ್ನ ಅವರ ಸಂಬಂಧ ಇನ್ನೂ ಕುದುರಿದ್ದು ೧೯೬೦ರಲ್ಲಿ.

ನಾನಾಗ ಬಸವನಗುಡಿಯ ನ್ಯಾಷನಲ್ ಹೈಸ್ಕೂಲ್‍ನಲ್ಲಿ ಓದುತ್ತಿದ್ದೆ. ಆಗ ನಮಗೆ “ಟೈಲರಿಂಗ್‘ ಅಥವಾ ’ಡ್ರಾಮಾಟಿಕ್ಸ್’ ನಡುವೆ ಯಾವುದಾದರೂ ಒಂದನ್ನು ಅಭ್ಯಸಿಸುವ ಆಯ್ಕೆಇತ್ತು. ನಾಟಕದ ರುಚಿ ಹತ್ತಿದ್ದ ನನಗೆ ನಿರ್ಧರಿಸುವುದು ಕಷ್ಟವೇನಾಗಲಿಲ್ಲ. ಎಲ್ಲಕ್ಕೂ ಹೆಚ್ಚಾಗಿ ಕಲಿಸುವ ಮೇಷ್ಟ್ರು ಶ್ರೀ ನಾರಾಯಣ ರಾಯರು. ನೋಡಲು ಬಹಳ ಸರಳ ಸ್ವಭಾವದ, ಮೃದುಭಾಷೀಯರಾಗಿ ಕಂಡರೂ ನಾಟಕದ ಪುಸ್ತಕ ಅವರ ಕೈಗೆ ಸಿಕ್ಕಿದರೆ ಸಾಕು ಅವರ ಅವತಾರವೇ ಬದಲಾಗುತ್ತಿತ್ತು. ನಮಗೆ ಮೇಕಪ್ ಮಾಡುವ ತಂತ್ರ, ಪರದೆ ಕಟ್ಟುವ ಅನೇಕ ಬಗೆಯ ವಿನ್ಯಾಸ, ಪ್ರಾಪ್ಸ್, ಲೈಟಿಂಗ್, ರಂಗಸಜ್ಜೆಯ ಅನೇಕ ಸೂತ್ರಗಳನ್ನು ಹೇಳಿಕೊಡುವ ಜೊತೆಯಲ್ಲಿಯೇ, ಅನೇಕ ಕನ್ನಡ ನಾಟಕಗಳ ಪರಿಚಯ ಮಾಡಿಕೊಟ್ಟವರು ಅವರೇ. ಬೇರೆ ಯಾವ ಕ್ಲಾಸಿಗೆ ಚಕ್ಕರ್ ಹೊಡೆದರೂ ಅವರ ಕ್ಲಾಸಿಗೆ ಮಾತ್ರ ನೂರಕ್ಕೆ ನೂರು ಪಾಲು ಹಾಜರಿಯಿರುತ್ತಿತ್ತು. ಕೈಲಾಸಮ್‍ರವರ ನಾಟಕಗಳ ಪರಿಚಯ ಅವರಿಗಿಂತ ಬೇರೆ ಯಾರು ತಾನೇ ಚೆನ್ನಾಗಿ ಮಾಡಿಕೊಡಬಲ್ಲರು? ಕ್ಲಾಸಿನಲ್ಲಿ ಟೊಳ್ಳು ಗಟ್ಟಿ; ಹೋಮ್‍ರೂಲು; ಬಂಡ್ವಾಳ್ವಿಲ್ಲದ್ಬಡಾಯಿ; ಪೋಲಿಕಿಟ್ಟಿ; ಸೂಳೆ; ಹುತ್ತದಲ್ಲಿ ಹುತ್ತ; Karna; Keechaka; Purpose ಇವೆಲ್ಲ ನಾಟಕಗಳನ್ನೂ ಭಾವಪೂರ್ಣವಾಗಿ ಓದಿ ಹೇಳಿ ನಮಗೆಲ್ಲ ಕ್ಲಿಷ್ಟವೆನಿಸಿದ್ದ ಕೈಲಾಸಂ ಕನ್ನಡವನ್ನು ಓದಲು ಹಾಗೂ ಮಾತನಾಡಲು ಸುಲಭವಾಗಿಸಿದ ಶ್ರೇಯ ರಾಯರದ್ದು.ಅವರ ಸಂವಾದದ ಧೋರಣೆ, ಧ್ವನಿಯ ಮಾಡ್ಯುಲೇಷನ್, ಥ್ರೋ ಅದೆಷ್ಟು ಪರಿಣಾಮಕಾರಿಯಾಗಿರುತ್ತಿತ್ತು ಎಂದು ಬಣ್ಣಿಸುವುದು ಕಷ್ಟ. ಇವರ ಕ್ಲಾಸು ದಿನದ ಅಂತ್ಯದಲ್ಲಿ ಇದ್ದಿದ್ದರಿಂದ ಅದೆಷ್ಟೊ ದಿನ ಕ್ಲಾಸು ಎರಡು ತಾಸಿಗೂ ಮೀರಿ ನಡೆಯುತ್ತಿತ್ತು. ನನಗೆ ನೆನಪಾದಂತೆ ಅವರು ಆನಂದ ರಚಿತ “ವೀರಯೋಧ” ನಾಟಕ ಓದಿದ್ದಾಗ , ಕ್ಲಾಸಿನಲ್ಲಿ ತೇವವಾಗದ ಕಣ್ಣುಗಳಿರಲಿಲ್ಲ.

ರಾಯರ ನಿರ್ದೇಶನದಲ್ಲಿಯೇ ನನ್ನ ರಂಗಪ್ರವೇಶದ ಸುಯೋಗವೂ ಬಂದೊದಗಿತು. ಡಾ. ಎಚ್. ಕೆ. ರಂಗನಾಥ್‍ರವರು ಆಲ್ ಇಂಡಿಯಾ ರೇಡಿಯೋದ ನಿರ್ದೇಶಕರಾಗಿದ್ದಾಗ “ರೇಡಿಯೋ ಸಪ್ತಾಹ” ಆಚರಣೆಯ ಅಂಗವಾಗಿ ಪ್ರೊ. ಕೆ. ವಿ. ಅಯ್ಯರ್ ವಿರಚಿತ ನಾಟಕ ’ಚೇಳು ಅಜ್ಜಾ ಚೇಳು” ವನ್ನು ರವಿ ಕಲಾವಿದರ ಮೂಲಕ ಅಭಿನಯಿಸಲು ಆಯ್ದುಕೊಂಡರು. ನನ್ನನ್ನೂ ಸೇರಿಕೊಂಡು ನನ್ನ ಸಹಪಾಠಿಗಳಾದ ಜಿ. ಕೆ. ಜಗದೀಶ್ (ಆಗಲೇ ಹೆಸರಾಂತ ಭರತನಾಟ್ಯಪಟು ಕೂಡ. ಈಗೆಲ್ಲಿದ್ದಾನೋ ಗೊತ್ತಿಲ್ಲ.) ಮತ್ತು ಬಿ.ಜಿ. ದ್ವಾರಕಾನಾಥ್‍ ( ಈಗ ಟೈಟಾನ್‍ ನಲ್ಲಿ ಸೀನಿಯರ್ ವೈಸ್‍ಪ್ರೆಸಿಡೆಂಟ್-ಹೊರೋಲಜಿ) ರನ್ನು ನಾಟಕದ ಮೂರು ಮಕ್ಕಳ ಪಾತ್ರಕ್ಕಾಗಿ ಆಯಲಾಯಿತು. ನಮ್ಮ ಅದೃಷ್ಟವೋ ಅದೃಷ್ಟ. ಅಜ್ಜನ ಪಾತ್ರದಲ್ಲಿ ನಾರಾಯಣ ರಾಯರು. ಅವರ ಮಗಳ ಪಾತ್ರದಲ್ಲಿ ಶ್ರೀಮತಿ ವಿಜಯ. ಮೊಮ್ಮಗನ ಪಾತ್ರ ಜಗದೀಶನ ಪಾಲಾಯಿತು. ನಿರ್ದೇಶನ ಖುದ್ದಾಗಿ ಪ್ರೊ. ಕೆ. ವಿ. ಅಯ್ಯರ್‍ ಅವರದ್ದು. ರಿಹರ್ಸಲ್ ಎಲ್ಲವೂ ಆಗ ಜೆ.ಸಿ. ರಸ್ತೆಯಲ್ಲಿದ್ದ ’ವ್ಯಾಯಾಮಶಾಲಾ’ದ ಹಿಂದೆ ಇದ್ದ ಅಯ್ಯರ್‍ರವರ ಮನೆಯಲ್ಲಿ. ಬಿರಿಯುವ ಮಾಂಸಖಂಡಗಳಿಂದ ತುಂಬಿದ, ನೋಡಲು ಎಷ್ಟು ಕಠೋರ ಎಂದು ಕಾಣುತ್ತಿದ್ದ ಅಯ್ಯರ್‍ರವರ ನಿಜವಾದ ಮೃದುವಾದ ವ್ಯಕ್ತಿತ್ವವನ್ನು ಅರಿಯುವ ಅವಕಾಶ ನಮಗಾಗಿತ್ತು. ನಿರ್ದೇಶನದಲ್ಲಿ ಅವರು ಕಠಿಣ ’ಟಾಸ್ಕ್ ಮಾಸ್ಟರ್”. ಜೊತೆಗೇ ಡಾ. ರಂಗನಾಥ್ ರವರು ಕನಿಷ್ಠ ಪಕ್ಷ ಅರ್ಧಕ್ಕೂ ಹೆಚ್ಚಿನ ರಿಹರ್ಸಲ್‍ಗಳಿಗೆ ಬಂದು ನಮ್ಮನ್ನು ಹುರಿದುಂಬಿಸುತ್ತಿದ್ದರು. ರಿಹರ್ಸಲ್ಗೆ ಬಂದ “ಸಣ್ಣ ಹುಡುಗರಿಗಾಗಿ” ಅಂತ ಶ್ರೀಮತಿ ಅಯ್ಯರ್ ತಯಾರಿಸುತ್ತಿದ್ದ ಬಿಸಿ ಬಿಸಿ ಬೋಂಡ ಕಾಫಿಗಳ ನೆನಪಾದಾಗಲೆಲ್ಲ ಬಾಯಿ ನೀರೂರುತ್ತದೆ. ನಾರಾಯಣ ರಾವ್‍ರವರ ಅಜ್ಜನ ಪಾತ್ರದ ಅಭಿನಯ ಅದೆಷ್ಟು ಹೃದಯಸ್ಪರ್ಶಿಯಾಗಿತ್ತೆಂದರೆ, ಆ ನಾಟಕ ನೋಡಲು ಬಂದವರಾರೂ ಒಣಗಿದ ಕಣ್ಣಲ್ಲಿ ಮನೆಗೆ ಹೋದ ನೆನಪಿಲ್ಲ. ಈ ನಾಟಕ ನಾವು ಕೇವಲ ಮೂರು ಬಾರಿ ರಂಗದ ಮೇಲೆ ತಂದದ್ದು.

ಅಯ್ಯರ್‍ರವರ ನಾಟಕ ಪ್ರೇಮ ಅದೆಷ್ಟಿತ್ತೆಂದರೆ, ರವಿ ಕಲಾವಿದರು ಅಭಿನಯಿಸಲು ಒಂದು ರಂಗಮಂದಿರವನ್ನೇ ಕಟ್ಟಿಸಿಕೊಟ್ಟಿದ್ದರು. ಅವರ ಅಧ್ಯಕ್ಷತೆಯಲ್ಲಿ ರವಿ ಕಲಾವಿದರು ತಮ್ಮ ’ಪೇಟ್ರನ್” ಗಳಿಗಾಗಿ ಪ್ರತಿ ತಿಂಗಳೂ ಒಂದು ನಾಟಕದ ಪ್ರಯೋಗ ಮಾಡುತ್ತಿದ್ದರು. ನಾಟಕಕ್ಕೆ ಬೇಕಾದ ಸಲಕರಣೆಗಳನ್ನು ಕೂಡಿಡಲು ಉಗ್ರಾಣದ ವ್ಯವಸ್ಥೆ ಕೂಡ ಮಾಡಿ ಕೊಟ್ಟಿದ್ದರು ಶ್ರೀ ಅಯ್ಯರ್.

೧೯೬೧ -೬೨ರಲ್ಲಿ ನ್ಯಾಷನಲ್ ಹೈಸ್ಕೂಲಿನಲ್ಲಿ ನಾರಾಯಣ ರಾಯರ ನಿರ್ದೇಶನದಲ್ಲಿ ಕಟ್ಟಿದ ಹೊಸ ರಂಗಭೂಮಿಯ ಅನಾವರಣಕ್ಕೆ ಆಯ್ಕೆಯಾದ ನಾಟಕ ಕೈಲಾಸಂರವರ ಇಂಗ್ಲೀಷ್ನಲ್ಲಿ ಬರೆದ ‘Purpose’ ನ ಕನ್ನಡ ಅನುವಾದ “ಏಕಲವ್ಯ”. ಈ ನಾಟಕದಲ್ಲಿ ಮೊದಲ ಸೀನಿನಲ್ಲಿಯೇ ಮೊದಲ ಮಾತಾಡುವ ಸಹದೇವನ ಪಾತ್ರಧಾರಿಯಾದ ನನಗೆ ದಕ್ಕಿತ್ತು. ಸ್ನೇಹಿತರಾದ ದ್ವಾರಕಿ, ಮತ್ತು ಜಗದೀಶ್ ಕೂಡ ಇದ್ದ ಈ ನಾಟಕದಲ್ಲಿ ಏಕಲವ್ಯನ ಪಾತ್ರದಲ್ಲಿ ಮೆರೆದವರು ಶ್ರೀ ನಾರಾಯಣ ರಾವ್. ದ್ರೋಣನಾಗಿ ಅಲ್ಲಿಯ ಇನ್ನೊಬ್ಬ ಮೇಷ್ಟ್ರು ಶ್ರೀ ಜಿ. ಕೆ. ನಾಗರಾಜನ್. ಅರ್ಜುನನ ಪಾತ್ರಧಾರಿ ಈಗಿನ ಪ್ರಖ್ಯಾತ ನಟ ಶ್ರೀನಾಥ್.

ಅವರ ಶಿಷ್ಯನಾದಮೇಲಂತೂ, ರವಿ ಕಲಾವಿದರು ಅಭಿನಯಿಸಿದ ಅನೇಕ ನಾಟಕಗಳಲ್ಲಿ ಅನುಭವಿಸುವ ಸುಯೋಗ ದೊರಕಿತು. ಬಂಡ್ವಾಳ್ವಿಲ್ಲದ್ಬಡಾಯಿಯ ಮುದ್ಮಣಿ; ಬಹದ್ದೂರ್ ಗಂಡಿನ ಶಿವು ಇಂಥದೇ ಮೊದಲಾದ ಚಿಕ್ಕ ಹುಡುಗನ ಪಾತ್ರಗಳು ಸಂದವು. ಬಂಡ್ವಾಳ್ವಿಲ್ಲದ್ಬಡಾಯಿಯ ಅಹೋಬ್ಲು ಪಾತ್ರದಲ್ಲಿ ನಾರಾಯಣ ರಾಯರ ಅಭಿನಯ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಕೈಲಾಸಂರವರ ನಾಟಕದಲ್ಲಿನ ಸಂಭಾಷಣೆಗಳು ಅವರ ನಾಲಿಗೆಯಲ್ಲಿ ಅದೆಷ್ಟು ಸುಲಲಿತವಾಗಿ ಹೊರಳುತ್ತಿತ್ತು ಅಂತ ವರ್ಣಿಸುವುದೇ

ಕಷ್ಟ. ನಾನು ಮುದ್ಮಣಿಯಾಗಿ ಅನೇಕ ರಿಹರ್ಸಲ್ಗಳಲ್ಲಿ ಮತ್ತು ಪ್ರದರ್ಶನಗಳಲ್ಲಿ ಭಾಗವಹಿಸಿದ್ದರೂ ಅವರೊಂದಿಗೆ ಪ್ರತಿ ಬಾರಿ ಅಭಿನಯಿಸುವಾಗಲೂ ನಗು ತಡೆ ಹಿಡಿಯುವುದೇ ಕಷ್ಟ ವಾಗಿರುತ್ತಿತ್ತು. ಪ್ರತಿ ಬಾರಿಯೂ ಒಂದು ಹೊಸ ಧಾಟಿ. ಇಂಪ್ರೊವೈಸೇಷನ್!

ಅದೆಷ್ಟೋ ಬಾರಿ ಭಾನುವಾರದಂದು ನನಗೆ ಪಾತ್ರವಿಲ್ಲದಿದ್ದರೂ , ನಾರಾಯಣ ರಾಯರ ಮಾತಿನ ಮೋಡಿಯನ್ನು ಕೇಳಲು ಅವರು ರಿಹರ್ಸಲ್ ಮಾಡುತ್ತಿದ್ದ ರೂಮಿಗೆ ಹೋಗಿ ಗಂಟೆಗಟ್ಟಲೆ ಕೂತಿದ್ದುಂಟು. ಸರಿಯಾದ ರೀತಿಯಲ್ಲಿ ಡೈಲಾಗ್ ನೀಡದಿದ್ದರೆ ಪದೇ ಪದೇ ಹೇಳಿಸಿ ತಮಗೆ ಬೇಕಾದ ರೀತಿಯಲ್ಲಿ ಹೇಳಿದ ಮೇಲೆಯೆ ಅವರು ಮುಂದೆ ಸಾಗುತ್ತಿದ್ದದ್ದು. “ಮೈಕ್ನಲ್ಲಿ ಮಾತಾಡ್ಬೇಕಾದ್ರೆ ನಿಧಾನವಾಗಿ ಮಾತನಾಡಬೇಕು. ಇಲ್ಲದಿದ್ರೆ ಪದಗಳು ’ರೋಲ್’ ಆಗುತ್ತೆ.” ಜೋರಾಗಿ ಮಾತನಾಡಬೇಕು. ಮೈಕ್ ಇಲ್ಲದಿದ್ರೂ ಕೇಳಿಸೋ ಥರ ಇರಬೇಕು” ’ ಕೈ ಕಾಲು ಆಡಿಸೋ ಬಗ್ಗೆ ನಿಗಾ ಇರಲಿ” ಹೀಗೆ ಅನೇಕ ಸಲಹೆಗಳು, ಟಿಪ್ಸು ಇತ್ಯಾದಿ. ಮರೆಯುವಹಾಗಿಲ್ಲ. ನಾಟಕದಲ್ಲಿನ ಸಂಭಾಷಣೆಯಲ್ಲಿ ಎಲ್ಲೆಲ್ಲಿ Pause ಇರಬೇಕು, ಎಲ್ಲಿ emphasis ಇರಬೇಕು, ಇಲ್ಲದಿದ್ದರೆ ಹೇಗೆ ಅಭಾಸವಾಗುತ್ತೆ ಎಂದು ಹೇಳಿ ಅಭಿನಯಿಸಿ ತೋರಿಸುತ್ತಿದ್ದರು.

ರಾಯರು ಅಭಿನಯಿಸಿದ ಪಾತ್ರಗಳಲ್ಲಿ ನಾನು ಮರೆಯಲಾಗದ್ದು “ವೀರಯೋಧ” ದ ಖೈದಿ. ಆನಂದ ವಿರಚಿತ ಈ ನಾಟಕದಲ್ಲಿ ಗಲ್ಲಿಗೆ ಹೋಗಲಿರುವ ಒಬ್ಬ ಖೈದಿ ಮತ್ತು ಅವನೇ ಚಿಕ್ಕಂದಿನಲ್ಲಿ ಕಳೆದು ಹೋಗಿದ್ದ ತನ್ನ ಅಣ್ಣ ಎಂದು ಅರಿಯಲಾಗದ ತಂಗಿಯ ಮುಗ್ಧ ಪ್ರೇಮದ ಮಾರ್ಮಿಕ ಕಥೆ. ತಂಗಿಗೆ ಮೊದಲು ತನ್ನಮೇಲಿದ್ದ ಅಭಿಮಾನ ಹಾಳಾಗಬಾರದೆಂದು ತನ್ನ ಪರಿಚಯ ಮಾಡಿಕೊಳ್ಳಲಾಗದೆ ತೊಳಲಾಡಿದ ಖೈದಿಯ ಪಾತ್ರದಲ್ಲಿ ಪ್ರತಿ ಬಾರಿ ಆಡಿದಾಗಲು ಅವರು ನಿಜವಾಗಿಯೂ ಅತ್ತದ್ದುಂಟು. ಅವರೊಂದಿಗೇ ಪ್ರೇಕ್ಷಕರು ಕೂಡ ಕಂಬನಿಯಿಡುತ್ತಿದ್ದರು. ಶೇಕ್ಸ್‌ಪಿಯರ್‍ನ “ಟೇಮಿಂಗ್ ಆಫ್ ದಿ ಶ್ರೂ” ನಾಟಕದಿಂದ ಪ್ರೇರಿತ ಪರ್ವತವಾಣಿಯವರ ನಾಟಕ “ಬಹದ್ದೂರ್ ಗಂಡ”ದ ಭೀಮುವಿನ ಪಾತ್ರದಲ್ಲಿ ನಿಜವಾಗಿಯೂ ಒಬ್ಬ ಇಂಗ್ಲೀಷ್ “Rake”ನಂತೆ ಅಭಿನಯಿಸುತ್ತಿದ್ದರು. “ಕಾಕನಕೋಟೆ”ಯ ರಣಧೀರ ಕಂಠೀರವ ಕೂಡ ಅವರ ಸ್ಮರಣೀಯ ಪಾತ್ರಗಳಲ್ಲೊಂದಾಗಿತ್ತು. ಅದರಲ್ಲಿ ಕಾನಕಾನ್ ಹಳ್ಳಿ ಗೋಪಿಯ ಕರಿಹೈದನ ನೃತ್ಯ ಮತ್ತು ನಮ್ಮ ತಂಡದ ಕೋಲಾಟ ಎಲ್ಲವೂ ಕಣ್ಣಿಗೆ ಕಟ್ಟಿದಂತಿವೆ. ಅವರು ಅಭಿನಯಿಸದಿದ್ದರೂ ಅವರ ವಿಶೇಷ ಛಾಪು ಅವರ ನಿರ್ದೇಶನದ ನಾಟಕಗಳಲ್ಲಿ ಕಂಡು ಬರುತ್ತಿತ್ತು. ಖ್ಯಾತ ಮರಾಠಿ ನಾಟಕಕಾರ ಪದ್ಮಶ್ರೀ ಪು. ಲ. ದೇಶಪಾಂಡೆಯವರ ಕನ್ನಡದಲ್ಲಿ ಅನುವಾದಿತ “ತನುವೂ ನಿನ್ನದೆ ಮನವೂ ನಿನ್ನದೆ” ನಾಟಕದಲ್ಲಿ ಆಗಿನ ತಂಡದಲ್ಲಿ ಹವ್ಯಾಸಿ ಕಲಾವಿದರಾಗಿದ್ದ ಸಿ. ಎಚ್. ಲೋಕ್‍ನಾಥ್ ( ವೀರಯೋಧದ ಇಂಸ್ಪೆಕ್ಟರ್ ಕೂಡ ) ಕಾಕಾಜಿಯ ಪಾತ್ರದಲ್ಲಿ ವಿಜೃಂಭಿಸಿದರು. ಅವರ ಸಂಭಾಷಣಾ ಶೈಲಿ ಯಲ್ಲಿ ನಾರಯಾಣರಾಯರ ತಾಲೀಮಿನ ಪಾತ್ರ ಬಹಳ ಮುಖ್ಯವಾದದ್ದು. ಇವರು ಮುಂದೆ ಹೆಸರಾಂತ ಚಲನಚಿತ್ರ ನಟರಾದರು. ಇದೇ ನಾಟಕದಲ್ಲಿ ಸ್ವಾಮೀಜಿಯ ಪಾತ್ರದಲ್ಲಿಬಹಳ ಹೆಸರು ಮಾಡಿದ ವ್ಯಕ್ತಿ ಶ್ರೀ ಸಿ. ವಿಶ್ವನಾಥ್ ( ಖ್ಯಾತ ಗಾಯಕ ಅಶ್ವಥ್‍ರವರ ಅಣ್ಣ, ಮುಂದೆ ನಾರಾಯಣರಾಯರ ಮಗ ಪ್ರಕಾಶ್‍ನ ಮಾವ ಕೂಡ).

೧೯೬೩ ರಲ್ಲಿ ನ್ಯಾಷನಲ್ ಕಾಲೇಜ್ ಸೇರಿದ ನಾನು ಅಲ್ಲಿಯ ನಾಟಕಾದಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಕಾರಣದಿಂದ ನಾರಾಯಣ ರಾವ್ ರವರ ಸಂಪರ್ಕ ಬಹಳ ಕಡಿಮೆಯಾಯಿತು. ಅದೂ ಅಲ್ಲದೆ ಆಗ ಹಿಸ್ಟ್ರಿಯಾನಿಕ್ ಕ್ಲಬ್‍ನ ನೇತೃತ್ವ ಆಗ ತಾನೆ ಲಂಡನ್‍ನಲ್ಲಿ ನಾಟಕ ಶಾಸ್ತ್ರದಲ್ಲಿ ಡಿಪ್ಲೊಮಾ ಪಡೆದು ಹಿಂತಿರುಗಿದ ಬಿ. ಎನ್. ನಾರಾಯಣ್ ( ಮೇಕಪ್ ನಾಣಿ) ಯವರದ್ದಾಗಿತ್ತು. ಅದೇನೋ ಏಕೋಈ ಗುಂಪಿನವರು ಆ ಗುಂಪಿನಲ್ಲಿರುತ್ತಿರಲಿಲ್ಲ. ನಾಣಿ ಗುಂಪಿನಲ್ಲಿ ಪ್ರಮುಖರಾಗಿದ್ದವರು, ಬಿ. ಆರ್. ಜಯರಾಮ್, ಎಸ್. ಆರ್. ಸೀತಾರಾಂ, ಸಿ. ಆರ್. ಸಿಂಹ, ಶ್ರೀನಿವಾಸ್ ಕಪ್ಪಣ್ಣ ಮುಂತಾದವರು. ನನಗೆ ತಿಳಿದ ಮಟ್ಟಿಗೆ ಶ್ರೀನಾಥ್ ಮಾತ್ರ ಎರಡೂ ಬಣಗಳಲ್ಲಿ ಆರಾಮಾಗಿ ಬೆರೆತವರು.


ನಾರಾಯಣ ರಾವ್‍ರವರ ವೈಯುಕ್ತಿಕ ಜೀವನದ ಬಗ್ಗೆ ನಮಗ್ಯಾರಿಗೂ ಅಷ್ಟೊಂದು ತಿಳಿದಿರಲಿಲ್ಲ. ಚಿಕ್ಕ ವಯಸ್ಸಿನ ಮಗನೊಬ್ಬನ ಅಕಾಲ ಮರಣ ಅವರನ್ನು ಬಾಧಿಸುತ್ತಿದ್ದಾಗಲೂ ಹೊರಗಡೆ ಯಾವಾಗಲೂ ಮಂದಸ್ಮಿತರಾಗಿ ಲವಲವಿಕೆಯಿಂದ ಒಡನಾಡುತ್ತಿದ್ದರು. ಅವರ ಹಾಸ್ಯ ಪ್ರವೃತ್ತಿ ನಿಜಕ್ಕೂ ಅಮೋಘವಾಗಿತ್ತು. ಹುಡುಗರಾಗಿದ್ದಾಗ ನಾವುರವಿ ಕಲಾವಿದರ ತಂಡದಲ್ಲಿ ಸೇರಿ KNS Bus Service ನ ಬಸ್ ಮಾಡಿಕೊಂಡು ಹಳ್ಳಿ ಹಳ್ಳಿಗಳಲ್ಲಿ ತಿರುಗಿದ್ದು, ದಿನವೆಲ್ಲ ಬಸ್ ಪ್ರಯಾಣ, ಮಧ್ಯಾಹ್ನ ಅಥವಾ ಸಂಜೆ ಸ್ಟೇಜ್ ಕಟ್ಟುವುದು, ಪೆಟ್ರೋಮ್ಯಾಕ್ಸ್ ದೀಪದಲ್ಲಿ ಬ್ಯಾಟರಿ ಯಿಂದ ನಡೆಯುವ ಮೈಕ್‍ಸೆಟ್ ಉಪಯೋಗಿಸಿ ರಾತ್ರಿ ೯ ಅಥವಾ ೧೦ ಘಂಟೆಗೆ ಶುರುವಾಗಿ ಬೆಳಗಿನ ಜಾವ ಮುಗಿಯುವ ನಾಟಕಗಳು, ಬಸ್‍ನಲ್ಲಿ ನಾರಾಯಣರಾವ್ ಮತ್ತಿತ್ತರರ ಜೋಕ್ಸ್ ಎಲ್ಲವೂ ನಿನ್ನೆ ಮೊನ್ನೆ ನಡೆದಂತಿವೆ.

ರವಿ ಕಲಾವಿದರ ಉಪಾಧ್ಯಕ್ಷರೂ ಹಾಗೂ ನಿರ್ದೇಶಕರೂ ಆಗಿ ರಾಯರು ಅನೇಕ ರಂಗ ಕಲಾವಿದರ ಏಳಿಗೆಗೆ ಕಾರಣರಾಗಿದ್ದರು. ಬಿ. ಎಮ್. ಎಸ್ ಕಾಲೇಜಿನ ವೈ. ವಿ. ರಾಮದಾಸ್, ಪ್ರಜಾವಾಣಿಯ ಜಿ. ಎಸ್. ರಾಮರಾವ್, ಶಿವನೆ ಗೋಪಾಲಿ, ಕಾನಕಾನಹಳ್ಳಿ ಗೋಪಿ, ಪ್ರಸನ್ನ, ಆನಂದೂ; ಮೂರ್ತಿ; ಶಂಕ್ರೂ; ಕೇಶವ; ಡಿ.ಎಲ್.ನರಸಿಂಹ ಮೂರ್ತಿ; ಶ್ರಿಮತಿ ಶಾಂತಾ ಭಾರದ್ವಾಜ್, ಶ್ರೀಮತಿ ಸರೋಜ ಹೀಗೆ ಅನೇಕ ಹವ್ಯಾಸಿ ಕಲಾವಿದರು ನಾರಾಯಣ ರಾಯರ ಕೃಪೆಯಿಂದ ಕೃತಾರ್ಥರಾದರು. ನಾರಾಯಣ ರಾಯರೇ ಬೆನ್ನೆಲುಬಾಗಿದ್ದ ರವಿ ಕಲಾವಿದರ ತಂಡ ಸುಮಾರು ೧೯೭೩-೭೪ ರಲ್ಲಿ ರಜತಜಯಂತಿ ಆಚರಿಸಿದ ಕೆಲವೇದಿನಗಳಲ್ಲಿ ಮುಚ್ಚಿಹೋಯಿತು.

ಐವತ್ತರ ಮತ್ತು ಅರವತ್ತರ ದಶಕಗಳಲ್ಲಿ ಬೆಂಗಳೂರಿನ ಹವ್ಯಾಸಿ ರಂಗಭೂಮಿಯಲ್ಲಿ ಮೆರೆದ ಇಂತಹ ವ್ಯಕ್ತಿಯ ಸ್ಮಾರಕವಾಗಿ ಏನೊಂದು ಕುರುಹೂ ಇಲ್ಲದಿರುವುದು ನಿಜಕ್ಕೂ ದುರದೃಷ್ಟಕರ. ಬಹುಶಃ ಅವರ ವ್ಯಕ್ತಿತ್ವವೇ ಎಲೆ ಮರೆಯ ಕಾಯಿಯಾಗಿ ಉಳಿಯುವಂತಹುದಾಗಿತ್ತೋ ಏನೋ. Flamboyance ಅವರ ಜಾಯಮಾನದ್ದಾಗಿರಲಿಲ್ಲ.

ಏನೇ ಇರಲಿ. Thanks ಗುಂಡೂರಾಯರೇ! ನಿಮ್ಮ ಲೇಖನ “has made my day.”

*************************************************************************************