Monday 8 September 2008

ಬೆರಳು ತುಂಡಾಯಿತೇ? ವರಾಹ ಚೂರ್ಣ ಹಚ್ಚಿ ಹೊಸ ಬೆರಳು ಪಡೆಯಿರಿ!

ವಿಷ್ಣುವಿನ ದಶಾವತಾರಗಳಲ್ಲಿ ಅನೇಕ ಪ್ರಾಣಿಗಳ ರೂಪಗಳಿದ್ದರೂ ಕೂಡ ಅರ್ಧ ಪ್ರಾಣಿ ಅರ್ಧ ಮಾನವ ನರಸಿಂಹನ ಹೊರತಾಗಿ ಬೇರೆ ಯಾರೂ ಪೂಜಾರ್ಹರೆನಿಸಿಕೊಳ್ಳಲಿಲ್ಲ. ಅದರಲ್ಲೂ ಸಾಕ್ಷಾತ್ ವರಾಹ ಎದುರಿಗೆ ಬಂದರಂತೂ ಪೂಜಿಸೋದಿರಲಿ, ಹೇಸಿಗೆಯಿಂದ ಓಡಿಹೋಗುವುದೇ ಹೆಚ್ಚು. ಆದರೆ ವರಾಹನನ್ನು ಆದರದಿಂದ ಕಾಣುವ ದಿನಗಳು ದೂರವೇನಿಲ್ಲ.

ಅಮೇರಿಕದ ಲೀ ಸ್ಪೀವಾಕ್ ಎಂಬ 69 ವರ್ಷದ ವ್ಯಕ್ತಿ ಒಂದು ಮಾಡೆಲ್ ಏರೋಪ್ಲೇನಿನ ಪ್ರೊಪೆಲ್ಲರ್‍ಗೆ ಕೈ ಕೊಟ್ಟು ತನ್ನ ಒಂದು ಬೆರಳಿನ ಅಂಗುಲದಷ್ಟು ಭಾಗವನ್ನು ಮೂಳೆ ಸಹಿತ ತುಂಡರಿಸಿಕೊಂಡರಂತೆ. ವೈದ್ಯರು ಆ ತುಂಡನ್ನು ಮತ್ತೆ ಜೋಡಿಸಲಾಗದು ಎಂದು ಕೈಚೆಲ್ಲಿ ಕೂತರಂತೆ. ಆದರೆ ಲೀರವರ ತಮ್ಮ ಅಲೆನ್ “regenerative medicine” ಕ್ಷೇತ್ರದಲ್ಲಿ ಸಂಶೋಧಿಸುತ್ತಿದ್ದು , ಅವರಿಗೆ ಪಿಟ್ಸ್‍ಬರ್ಗ್ ವಿಶ್ವವಿದ್ಯಾನಿಲಯದಲ್ಲಿ ಡಾಕ್ಟರ್ ಸ್ಟೀಫನ್ ಬ್ಯಾಡಿಲಾಕ್ ಅವರ ಪ್ರಯೋಗಶಾಲೆಯಲ್ಲಿ ತಯಾರಿಸಿದ “ ಪಿಕ್ಸೀ ಡಸ್ಟ್” ಎಂಬ ಪುಡಿ ತಂದುಕೊಟ್ಟು, ಇದನ್ನು ಪ್ರತಿ ದಿನ ಆ ತುಂಡಾದ ಬೆರಳಿನ ಗಾಯದ ಮೇಲೆ ಸಿಂಪಡಿಸು ಎಂದು ಹೇಳಿದರಂತೆ. ಲೀ ಅದರಂತೆ ಮಾಡಹೋಗಿ ದಿನೇ ದಿನೇ ಆ ಬೆರಳು ಮತ್ತೆ ಬೆಳೆದು ಕೇವಲ ನಾಲ್ಕು ವಾರಗಳಲ್ಲಿ ಸಂಪೂರ್ಣ ಮೊದಲಿನಂತೆ ಆಗಿದೆಯಂತೆ. ಬರೆ ಬೆರಳಿನ ಮಾಂಸವಷ್ಟೇ ಅಲ್ಲದೆ ಮೂಳೆ , ಉಗುರು, ಚರ್ಮ ಮತ್ತು ಬೆರಳಚ್ಚು ಕೂಡ ಮೊದಲಿನಂತೆಯೇ ಆಗಿದೆಯಂತೆ.

ಈ ವೈದ್ಯಕೀಯ ಕೌತುಕದ ಮೂಲ ಕಾರಣ ಬೇರಾರೂ ಅಲ್ಲ. ಶ್ರೀ ವರಾಹ ಮೂರ್ತಿಗಳು.

ಡಾ. ಬ್ಯಾಡಿಲಾಕ್ ತಮ್ಮ ಪ್ರಯೋಗಶಾಲೆಯಲ್ಲಿ ಹಂದಿಯ ಮೂತ್ರಕೋಶದಿಂದ ಜೀವಾಣುಕೋಶಗಳನ್ನು ಹೆರೆದು ತೆಗೆದನಂತರ ಆಮ್ಲದಲ್ಲಿ ಪರಿಷ್ಕರಿಸಿ, extra cellular matrix ಎಂಬ ಪದಾರ್ಥವನ್ನು ಪುಡಿ ಅಥವಾ ಹಾಳೆಗಳ ರೂಪದಲ್ಲಿ ತಯಾರಿಸುತ್ತಾರೆ. ಹೀಗೆ ತಯಾರಾದ ಪುಡಿ ಅಥವಾ ಹಾಳೆಯನ್ನು ಗಾಯದ ಮೇಲೆ ಉದುರಿಸಿ ಅಥವಾ ಸುತ್ತಿದಾಗ, ಆ ಗಾಯ ಹಾಗೆಯೇ ಮಾಗದೆ, ಅಲ್ಲಿನ ಜೀವಾಣುಕೋಶ ಹಾಗೂ ಟಿಶ್ಯೂಗಳು ಪುನರುಜ್ಜೀವನಗೊಂಡು ಆ ತುಂಡರಿಸಿದ ಭಾಗ ಮತ್ತೆ ಪೂರ್ಣವಾಗಿ ಬೆಳೆಯಲು ಪ್ರೇರೇಪಿಸುತ್ತದೆ.

ಈ ಅತ್ಯಂತ ವಿಸ್ಮಯಜನಕ ಹಾಗೂ ಕ್ರಾಂತಿಕಾರಿ ಸಂಶೋಧನೆಯಲ್ಲಿ ಅಮೇರಿಕದ ಮಿಲಿಟರಿ ಬಹಳ ಉತ್ಸುಕತೆ ತೋರಿದೆ. ಯುಧ್ಧದಲ್ಲಿ ಕೈ ಕಾಲು ಕಳೆದುಕೊಂಡ ಯೋಧರಿಗೆ ಈ ಅಧ್ಯಯನ ಆಶಾಕಿರಣವಾಗಿ ಕಂಡುಬಂದಿದೆ.

ನಂಬಲಸಾಧ್ಯವೇ? ಹಾಗಾದರೆ ಹೆಚ್ಚಿನ ವಿವರ ಹಾಗೂ ವಿಡಿಯೋಗಳಿಗಾಗಿ ಕೆಳಗಿನ ಕೊಂಡಿಯ ಮೇಲೆ ಚಿಟುಕಿಸಿ.

http://news.bbc.co.uk/2/hi/health/7354458.stm

ಇನ್ನು ಮೇಲಾದರೂ ವರಾಹಮೂರ್ತಿಗಳು ರಸ್ತೆಯಲ್ಲಿ ಕಂಡಾಗ, ಅಸಹ್ಯ ಪಟ್ಟುಕೊಂಡು ಮುಖತಿರುಗಿಸಬೇಡಿ.
ಸ್ವಲ್ಪವಾದರೂ ಗೌರವ ಭಾವದಿಂದ ನೋಡಿ.

8-09-2008

ಆಟದಲ್ಲಷ್ಟೇ ಅಲ್ಲ. ಪಾಠದಲ್ಲೂ ಚೀನಾ ಭಾರತಕ್ಕಿಂತ ಮುಂದೆ!

ಒಂದು ದೇಶದ ವೈಜ್ನಾನಿಕ ಸಂಶೋಧನೆಯ ಗುಣ ಮಟ್ಟ ಎಷ್ಟು ಎನ್ನುವುದು ಆ ದೇಶದ ಮೂಲಭೂತ ಸಂಶೋಧನಾ ಲೇಖನಗಳು ಅದೆಷ್ಟು ಸಂಖ್ಯೆಯಲ್ಲಿ ಪ್ರಪಂಚದ ಪ್ರಮುಖ ಪ್ರತಿಷ್ಠಿತ ವಿಜ್ನಾನ ನಿಯತಕಾಲಿಕಗಳಲ್ಲಿಪ್ರಕಟವಾಗಿದೆ (number of publications) ಮತ್ತು ಅದರಲ್ಲೆಷ್ಟು ಲೇಖನಗಳು ಬೇರೆಯವರ ಸಂಶೋಧನೆಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ ( Citation Index) ಎಂಬುದರ ಮೇಲೆ ನಿರ್ಭರವಾಗುತ್ತದೆ. ಅನೇಕ ವರ್ಷಗಳಿಂದ ಜಾಗತಿಕ ಮಟ್ಟದಲ್ಲಿ ಭಾರತೀಯ ವೈಜ್ನಾನಿಕ ಸಂಶೋಧನಾ ಕೊಡುಗೆ ಕ್ರಮೇಣ ಕಡಿಮೆಯಾಗುತ್ತಿದ್ದು, ಮುಂದುವರೆದ ದೇಶಗಳ ತುಲನೆಯಲ್ಲಿ ಹಾಗಿರಲಿ, ಹಲವೇ ವರ್ಷಗಳ ಹಿಂದೆ ಒಂದೇ ಮಟ್ಟದಲ್ಲಿದ್ದ ಚೀನಾ, ದಕ್ಷಿಣ ಕೊರಿಯಾ, ಮತ್ತು ಬ್ರೆಝಿಲ್‍ ದೇಶಗಳಿಗಿಂತಲೂ ತುಂಬಾ ಹಿಂದುಳಿದಿದೆ.

ಭಾರತದ National Institute of Science Technology and Developmental Studies( NISTADS) ಹಮ್ಮಿಕೊಂಡ ಇಪ್ಪತ್ತು ದೇಶಗಳ ಅಧ್ಯಯನವೊಂದರ ಪ್ರಕಾರ 1996 ರಲ್ಲಿ ಭಾರತ 13ನೇ ಸ್ಥಾನದಲ್ಲಿತ್ತು. ಅದೇ ವರ್ಷ ಚೀನಾ 9ನೇ ಸ್ಥಾನದಲ್ಲಿತ್ತು.

2006ನೇ ವರ್ಷದಲ್ಲಿ ಭಾರತ 10ನೇ ಸ್ಥಾನ ಗಳಿಸಿದರೆ, ಚೀನಾ ಬಹಳ ಮುಂದುವರೆದು 2 ನೇ ಸ್ಥಾನ ಗಳಿಸಿಕೊಂಡಿದೆ. ಈ ಅಧ್ಯಯನದ ಪ್ರಕಾರ ಈ ಹತ್ತು ವರ್ಷಗಳಲ್ಲಿ ಚೀನಾ ವರ್ಷಂಪ್ರತಿ 20.74 % ಪ್ರಗತಿ ತೋರಿದರೆ ಭಾರತ ಕೇವಲ 7.02% ಪ್ರಗತಿ ಸಾಧಿಸಿತು. ಭಾರತದ ತುಲನೆಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿದ ರಾಷ್ಟ್ರಗಳು - ದಕ್ಷಿಣ ಕೊರಿಯಾ 14.16% ಹಾಗೂ ಬ್ರೆಝಿಲ್ 12.04% .

NISTADSನ ಪ್ರೊ. ಬಿ. ಎಮ್. ಗುಪ್ತಾರವರ ಪ್ರಕಾರ ಚೀನಾಕ್ಕೆ ಸರಿಸಮ ಬರಬೇಕಾದರೆ ಭಾರತ 2010ರ ವೇಳೆಗೆ ತನ್ನ ಸಂಶೋಧನಾ ಪ್ರಕಟಣೆಯ ಭರವನ್ನು ವರ್ಷಂಪ್ರತಿ 30% ಮಟ್ಟಕ್ಕೆ ಏರಿಸಬೇಕಾಗುತ್ತದೆ. ಇಲ್ಲವಾದಲ್ಲಿ ನಮ್ಮಿಬ್ಬರ ನಡುವಣ ಕಂದರ ವರ್ಷೇ ವರ್ಷೇ ಇನ್ನೂ ಹೆಚ್ಚಾಗುತ್ತಾ ಹೋಗುತ್ತದೆ.

SCOPUS ಎಂಬ ಮತ್ತೊಂದು ಅಧ್ಯಯನದ ಪ್ರಕಾರ ಜಾಗತಿಕ ಸಂಶೋಧನೆಗೆ ಭಾರತದ ಕೊಡುಗೆ ಕೇವಲ 2.4%. ಅದೇ ಚೀನಾದ ಕೊಡುಗೆ 10.49%, ಅಂದರೆ ನಮಗಿಂತ ನಾಲ್ಕುಪಟ್ಟು ಹೆಚ್ಚು.

ಅಮೇರಿಕದ Office of Naval Research ವಿಜ್ನಾನಿ ರೊನಾಲ್ ಕೋಸ್ಟಾಫ್ ಎಂಬುವರ ಅಧ್ಯಯನದ ಪ್ರಕಾರ 1980ರಲ್ಲಿ ಭಾರತ ಚೀನಾಗಿಂತ 14 ಪಟ್ಟು ಜಾಸ್ತಿ ಲೇಖನಗಳನ್ನು ಪ್ರಕಟಿಸುತ್ತಿತ್ತು. 1995ರ ವೇಳೆಗೆ ಎರಡೂ ದೇಶಗಳು ಒಂದೇ ಮಟ್ಟ ತಲುಪಿದ್ದವು. ಆದರೆ 2005ರ ವೇಳೆಗೆ ಚೀನಾ ಭಾರತಕ್ಕಿಂತ ಮೂರು ಪಟ್ಟು ಹೆಚ್ಚು ಪ್ರಕಟಣೆಗಳಿಂದ ಬಹಳ ಮುಂದುವರೆದಿತ್ತು. ಎಂದರೆ ಚೀನಾ ಕೇವಲ ಇಪ್ಪತ್ತೈದು ವರ್ಷಗಳಲ್ಲಿ ತನ್ನ ವಿಜ್ನಾನದ ಜಾಗತಿಕ ಕೊಡುಗೆಯನ್ನು ಸುಮಾರು 40 ಪಟ್ಟು ಹೆಚ್ಚಿಸಿದಂತಾಯಿತು. ಭಾರತೀಯರಿಗಿದ್ದಷ್ಟು ಇಂಗ್ಲೀಷ್ ಭಾಷೆಯ ಜ್ನಾನದ ಅನುಕೂಲ ತಮಗಿಲ್ಲದಿದ್ದಾಗ್ಯೂ ಚೀನಾ ದೇಶದ ವಿಜ್ನಾನಿಗಳು ಜಾಗತಿಕ ಮಟ್ಟದಲ್ಲಿ ತಮ್ಮ ವಿಜ್ನಾನದ ಕೊಡುಗೆಯ ಸಂಖ್ಯೆ ಮತ್ತು ಗುಣಮಟ್ಟ ಇಷ್ಟರಮಟ್ಟಿಗೆ ಹೆಚ್ಚಿಸಿದ್ದು ನಿಜಕ್ಕೂ ಶ್ಲಾಘನೀಯ.

ಪ್ರೊ. ಸಿ. ಎನ್. ಆರ್. ರಾವ್‍ರಂತಹ ಮೇಧಾವಿ ವಿಜ್ನಾನಿಗಳನ್ನು ತನ್ನ ಪ್ರಧಾನ ಸಲಹೆಗಾರರಾಗಿ ನೇಮಿಸಿಕೊಂಡಿರುವ ಭಾರತ ಸರ್ಕಾರ, ಕಾಲ ಕಾಲಕ್ಕೆ ಅವರಿತ್ತ ಎಚ್ಚರಿಕೆ, ಸಲಹೆ ಮತ್ತು ಸೂಚನೆಗಳನ್ನು ಗಣನೆಗೆ ತೆಗೆದುಕೊಳ್ಳದಿರುವುದು ಒಂದು ಮಹಾದುರಂತವೇ ಸರಿ.

ನಮ್ಮ ವಿಜ್ನಾನ ಮತ್ತು ತಂತ್ರಜ್ನಾನ ವಿಭಾಗದ ಮಂತ್ರಿಮಹೋದಯ ಕಪಿಲ್ ಸಿಬಾಲ್ ಮಾತ್ರ “ಇದರಲ್ಲಿ ಆಶ್ಚರ್ಯವೇನಿದೆ? ನಮ್ಮಲ್ಲಿ ವೈಜ್ನಾನಿಕ ಸಂಶೋಧನೆಗೆ ಜಿ.ಡಿ.ಪಿಯ ಕೇವಲ 0.8% ಖರ್ಚು ಮಾಡುತ್ತೇವೆ. ಇದರ ತುಲನೆಯಲ್ಲಿ ಚೀನಾ 1.23% ಹಣ ವ್ಯಯ ಮಾಡುತ್ತದೆ. ಎಲ್ಲಿಯವರೆಗೂ ಪ್ರೈವೇಟ್ ರಿಸರ್ಚ್ ಮತ್ತು ವಿಶ್ವವಿದ್ಯಾನಿಲಯಗಳು ಹುಟ್ಟಿಕೊಳ್ಳುವುದಿಲ್ಲವೋ ಈ ಸ್ಥಿತಿ ಇದೇ ರೀತಿ ಮುಂದುವರೆಯುವುದು ಖಂಡಿತ” ಎಂದು ಕೈ ಕೊಡವಿಕೊಂಡಿದ್ದಾರೆ.

ಇಂತಹ ಧುರೀಣರ ಮುಖಂಡತ್ವದಲ್ಲಿ ನಮ್ಮ ದೇಶದ ಭವಿಷ್ಯವದೇನಿದೆಯೋ ಆ ದೇವರೇ ಬಲ್ಲ.