Tuesday 4 March 2008

ಆಧುನಿಕ ಔದ್ಯೋಗಿಕ ಭಾರತದ ಶಿಲ್ಪಿ , ಅಪ್ರತಿಮ ದೇಶಪ್ರೇಮಿ - ಶ್ರೀ ಜಮ್‍ಷೆಡ್ಜಿ ಟಾಟಾ.

- ನವರತ್ನ ಸುಧೀರ್


3rd March 2008 - ಶ್ರೀ ಜಮ್‍ಷೆಡ್ಜಿ ಟಾಟಾ ಅವರ 169ನೇ ಜನ್ಮದಿನ. ಭಾರತೀಯ ವಿಜ್ನಾನ ಸಂಸ್ಥೆ ಮತ್ತು ಟಾಟಾ ಸಂಸ್ಥೆಗಳ Founders Day. 2008-2009 ಭಾರತೀಯ ವಿಜ್ನಾನ ಸಂಸ್ಥೆಯ ಶತಮಾನೋತ್ಸವ ವರ್ಷ ಕೂಡ.

ಇಸವಿ 1822. ಈಗಿನ ಗುಜರಾತ್‍ನ ನವಸಾರಿ ಎಂಬ ಸಣ್ಣ ಊರಿನಲ್ಲಿ ಒಂದು ಬಡ ಪಾರಸೀ ಅಗ್ನಿ ದೇವಾಲಯದ ಪುರೋಹಿತರ ಕುಟುಂಬದಲ್ಲಿ ಜನಿಸಿದ ಮಗು ನಸ್ಸರ್‍ವಾನ್ಜೀ ಟಾಟಾ. ಹುಟ್ಟಿದ ಮಗುವನ್ನು ಕಂಡ ಜ್ಯೋತಿಷಿಯೊಬ್ಬರು “ ಈ ಮಗು ಬಹಳ ದೇಶ ವಿದೇಶಗಳ ಪ್ರಯಾಣ ಮಾಡಿ, ಹೇರಳ ಹಣ ಸಂಪಾದಿಸಿ ಏಳು ಮಹಡಿಯ ಮನೆ ಕಟ್ಟುತ್ತಾನೆ” ಅಂತ ಭವಿಷ್ಯ ನುಡಿದರು. ಇದನ್ನು ನಂಬಲಾಗದ ತಂದೆ ತಾಯಿಗಳು ಜ್ಯೋತಿಷಿಗೆ ಅವಮಾನವಾಗದಿರಲಿ ಅಂತ ಸುಮ್ಮನೆ ಮುಗುಳ್ನಕ್ಕು ದಕ್ಷಿಣೆ ಕೊಟ್ಟು ಕಳಿಸಿದರು. ಆ ಚಾಣಾಕ್ಷ ಮಗು ಬೆಳೆದು ದೊಡ್ಡವನಾಗಿ ವಂಶಪಾರಂಪರ್ಯವಾದ ಪೌರೋಹಿತ್ಯ ತ್ಯಜಿಸಿ, ವ್ಯಾಪಾರ ವಹಿವಾಟಿನಲ್ಲಿ ಪಾರಂಗತನಾಗಿ, ದೇಶ ವಿದೇಶ ಪರ್ಯಟಿಸಿ ಭವಿಷ್ಯವಾಣಿಯನ್ನು ನಿಜಮಾಡಿದ. ಹೇರಳ ಸಂಪತ್ತನ್ನು ಗಳಿಸಿ ಮುಂಬೈನಗರದಲ್ಲಿ ಒಂದು ಏಳು ಮಹಡಿಯ ಮನೆಯನ್ನು ಕೂಡ ಕೊಳ್ಳಲು ಸಾಧ್ಯವಾಯಿತು. ಹದಿನಾರು ವರ್ಷದವರಾಗಿದ್ದಾಗಲೇ ಜೀವನ್‍ಬಾಯಿಯೊಡನೆ ವಿವಾಹವಾಯಿತು.

3ನೇ ಮಾರ್ಚ್ 1839ರಂದು ನವಸಾರಿಯಲ್ಲಿಯೇ ಜೇಷ್ಠ ಪುತ್ರ ಜಮ್‍ಶೆಡ್ಜೀಯವರ ಜನ್ಮವಾಯಿತು. ವಂಶದ ಸಂಪ್ರದಾಯಕ್ಕೆ ತಕ್ಕಂತೆಯೇ ಜಮ್‍ಶೆಡ್ಜಿ ಕೂಡ ಪೌರೋಹಿತ್ಯಕ್ಕೆ ಬೇಕಾದ ಆಚಾರ ಸಂಸ್ಕಾರಗಳನ್ನು ಕಲಿಯಲಾರಂಭಿಸಿದರು. ಶಾಲೆಗೆ ಹೋಗಿ ಕಲಿಯಬೇಕೆಂಬ ನಿರ್ವಾಹವೂ ಆಗಿನ ದಿನಗಳಲ್ಲಿ ಇರಲಿಲ್ಲ. ಆದರೆ ಅವರ ಹದಿಮೂರನೆ ವಯಸ್ಸಿನಲ್ಲೇ ತಂದೆ ನಸ್ಸೆರ್‍ವಾನ್ಜೀ ಅವರನ್ನು ಮುಂಬೈಗೆ ಕರೆತಂದು ಮೊದಲು ಮನೆಯಲ್ಲಿಯೇ ಆಮೇಲೆ ಎಲ್ಫಿನ್‍ಸ್ಟೋನ್ ಕಾಲೇಜಿನಲ್ಲಿ ಶಿಕ್ಷಣ ಕೊಡಿಸಲು ಏರ್ಪಾಡು ಮಾಡಿದರು. ಕುಶಾಗ್ರ ಮತಿಯ ಯುವಕ ಬಹು ಬೇಗ ತನ್ನ ಪ್ರತಿಭೆಯನ್ನು ಪ್ರದರ್ಶಿಸಿ 1858ರಲ್ಲಿಯೇ ಪದವೀಧರನಾದರು. ಉತ್ತಮ ಪುಸ್ತಕಗಳನ್ನು ಓದಿ ಜ್ನಾನ ವಿಸ್ತಾರಮಾಡಿಕೊಳ್ಳುವ ಗೀಳು ಹತ್ತಿದ್ದೂ ಇಲ್ಲಿಯೇ. ಇನ್ನೂ ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ತಮಗಿಂತ ಐದು ವರ್ಷ ಚಿಕ್ಕವಳಾದ ಒಬ್ಬ ಪುರೋಹಿತರ ಮಗಳು ಹೀರಾಬಾಯಿಯೊಡನೆ ವಿವಾಹ ಕೂಡ ಜರುಗಿತು. ಮೊದ ಮೊದಲು ಒಬ್ಬ ವಕೀಲರ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ ಜಮ್‍ಶೆಡ್ಜಿಗೆ ಬಹುಬೇಗ ತಂದೆಯಾಗುವ ಯೊಗ ಬಂದಿತು. ಹಿರಿಯ ಮಗ ದೊರಾಬ್‍ನ ಜನ್ಮ 1859ರಲ್ಲಿ. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಹೆಸರಾದ ಸಿಪಾಯಿ ದಂಗೆ ಮುಗಿದ ಕೇವಲ ಎರಡು ವರ್ಷಗಳು ಕೂಡ ಕಳೆದಿರಲಿಲ್ಲ. ವ್ಯಾಪಾರ ವಹಿವಾಟಿಗೆ ಅನುಕೂಲ ಸಮಯವೂ ಅದಾಗಿರಲಿಲ್ಲ. ತಂದೆಯಾದ ಹೊಣೆಗಾರಿಕೆ ಬೇರೆ. ಹಣ ಸಂಪಾದಿಸಲೇ ಬೇಕಿತ್ತು. ಹೀಗಾಗಿ ಅವರು ವಕೀಲರ ಸಂಸ್ಥೆಯ ಕೆಲಸ ತ್ಯಜಿಸಿ ತಂದೆಯವರ ಆಯಾತ ನಿರ್ಯಾತ ನಡೆಸುತ್ತಿದ್ದ ಟ್ರೇಡಿಂಗ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದರು. ಉತ್ತಮ ವಿದ್ಯಾಭ್ಯಾಸದ ತಳಹದಿ, ತೀಕ್ಷ್ಣ ಬುಧ್ಧಿ, ಮತ್ತು ತಂದೆಯವರ ಮಾರ್ಗದರ್ಶನದಿಂದ ಜಮ್‍ಶೆಡ್ಜೀ ಬಹುಬೇಗ ವ್ಯಾಪಾರ ಮತ್ತು ಬ್ಯಾಂಕಿಂಗ್ ವ್ಯವಹಾರಗಳಲ್ಲಿ ನುರಿತವರಾದರು.

1864ರಲ್ಲಿ ಇಪ್ಪತ್ತೈದು ವರ್ಷ ವಯಸ್ಸಿನ ಯುವಕ ಜಮ್‍ಶೆಡ್ಜಿ ಮೊದಲ ಬಾರಿಗೆ ತಮ್ಮಕಂಪನಿಯ ವತಿಯಿಂದ ಇಂಗ್ಲೆಂಡಿನ ಪ್ರವಾಸ ಕೈಗೊಂಡರು. ಅವರ ಸಂಸ್ಥೆ ಅದಾಗಲೇ ಭಾರತದಿಂದ ಹೇರಳ ಪ್ರಮಾಣದಲ್ಲಿ ಹತ್ತಿಯನ್ನು ಇಂಗ್ಲೆಂಡಿನ ಲಿವರ್‍ಪೂಲ್ ‍ನಲ್ಲಿನ ಟೆಕ್ಸ್‍ಟೈಲ್ ಮಿಲ್ಲುಗಳಿಗೆ ನಿರ್ಯಾತ ಮಾಡುತ್ತಿತ್ತು. ಈ ಪ್ರವಾಸದಲ್ಲಿಮ್ಯಾನ್‍ಚೆಸ್ಟರ್ ಮತ್ತು ಲ್ಯಾಂಕಶೈರ್ ನಗರಗಳಲ್ಲಿನ ಕಾಟನ್ ಮಿಲ್ಲುಗಳನ್ನು ಅಧ್ಯಯನ ಮಾಡುವ ಅವಕಾಶ ದೊರಕಿತು. ಸುಮಾರು ಹತ್ತು ವರ್ಷಗಳ ಕಾಲ ಆ ಉದ್ಯಮದ ಎಲ್ಲ ಮುಖಗಳನ್ನು ಪರಿಚಯಿಸಿಕೊಂಡ ಜಮ್‍ಶೆಡ್ಜಿ ಭಾರತಕ್ಕೆ ಹಿಂತಿರುಗಿ ಬಂದರು. ಅದುವರೆಗೂ ಕೇವಲ ಬ್ರಿಟಿಷರ ಹತೋಟಿಯಲ್ಲಿದ್ದ ಟೆಕ್ಸ್‍ಟೈಲ್ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂದ ಪ್ರಥಮ ಭಾರತೀಯರಾದರು. ಎಲ್ಲರಂತೆ ಹೊಸ ಮಿಲ್ಲನ್ನು ಮುಂಬೈನಲ್ಲಿ ಸ್ಥಾಪಿಸದೆ, ಮಹಾರಾಷ್ಟ್ರದ ಹತ್ತಿ ಬೆಳೆಯ ಕೇಂದ್ರವಾದ ನಾಗಪುರದಲ್ಲಿಸ್ಥಾಪಿಸಲೆಣಿಸಿದರು. 1874ರಲ್ಲಿ ಒಂದೂವರೆ ಲಕ್ಷ ರೂಪಾಯಿನ ಬಂಡವಾಳದಿಂದ ಸೆಂಟ್ರಲ್ ಇಂಡಿಯಾ ಸ್ಪಿನ್ನಿಂಗ್ ವೀವಿಂಗ್ ಅಂಡ್ ಮ್ಯಾನುಫಾಕ್ಚರಿಂಗ್ ಕಂಪನಿ ಅಸ್ಥಿತ್ವಕ್ಕೆ ಬಂದಿತು. 1877ರ ಜನವರಿಯಲ್ಲಿ ರಾಣಿ ವಿಕ್ಟೋರಿಯಾ ಭಾರತದ ಚಕ್ರವರ್ತಿನಿಯಾಗಿ ಅಭಿಷಿಕ್ತಳಾದ ಸಂದರ್ಭದಲ್ಲಿ ಎಂಪ್ರೆಸ್ ಮಿಲ್ ಹೆಸರಿನ ಒಂದು ಅತ್ಯಾಧುನಿಕ ಟೆಕ್ಸ್‍ಟೈಲ್ ಮಿಲ್ ಒಂದನ್ನು ನಾಗಪುರದಲ್ಲಿಪ್ರಾರಂಭಿಸಿದರು. ಭಾರತೀಯ ಒಡೆತನದ ಪ್ರಪ್ರಥಮ ಮಿಲ್. ಇಲ್ಲಿಯ ಬ್ರಿಟಿಷ್ ಆಡಳಿತದ ಭಾರತ ಸರ್ಕಾರ ಕಾರ್ಮಿಕರ ಕಲ್ಯಾಣಕ್ಕಾಗಿ ಯಾವ ರೀತಿಯ ಕಾನೂನು ನಿಯಮ ನಿರ್ಬಂಧಗಳನ್ನು ವಿಧಿಸದಿದ್ದಾಗಲೂ ಜಮ್‍ಶೆಡ್ಜಿ ತಮ್ಮ ಮಿಲ್‍ನಲ್ಲಿ ಸ್ವಪ್ರೇರಣೆಯಿಂದ ಕಾರ್ಮಿಕರ ಪರವಾದ ಅನೇಕ ಸೌಕರ್ಯಗಳನ್ನು ಕಲ್ಪಿಸಿಕೊಟ್ಟರು.

ಅಪ್ರತಿಮ ದೇಶಭಕ್ತರಾದ ಅವರಿಗೆ ದಾದಾಭಾಯ್ ನವರೋಜಿ , ಫಿರೋಜ್‍ಶಾ ಮೆಹ್ತಾರಂತಹ ಸ್ವತಂತ್ರ ಸೇನಾನಿಗಳ ನಿಕಟ ಸಂಪರ್ಕವಿತ್ತು. ಇದರ ಜೊತೆಗೇ ಅವರಿಗೆ ಭಾರತದ ಪ್ರಜೆಗಳು ನಿಜವಾಗಿಯೂ ಸ್ವತಂತ್ರರಾಗಬೇಕಾದರೆ ರಾಜಕೀಯ ಸ್ವಾತಂತ್ರದೊಡನೆಯೇ ಅರ್ಥಿಕ ಸ್ವಾಯತ್ತತೆ ಬಹಳ ಮುಖ್ಯ ಎಂಬ ಅರಿವಿತ್ತು. ಆದ್ದರಿಂದ ಅವರು ಎಲ್ಲೇ ಪ್ರಯಾಣ ಮಾಡಲಿ ಯಾರನ್ನೇ ಭೇಟಿಯಾಗಲಿ ಸದಾಕಾಲ ಆಧುನಿಕ ಭಾರತದ ಕನಸು ಕಾಣುವುದೇ ಒಂದು ಪರಿಪಾಠವಾಗಿಹೋಯಿತು.

ಭಾರತಕ್ಕಾಗಿ ಅವರು ಕಂಡ ಕನಸುಗಳಲ್ಲಿ ಮಹತ್ತರವಾದದ್ದು ಈ ಕೆಳಗಿನವು.

· ಭಾರತ ಉನ್ನತ ಶ್ರೇಣಿಯ ರಾಷ್ಟ್ರವೆನಿಸಿಕೊಳ್ಳಬೇಕಾದರೆ ಅಧುನಿಕ ಉಕ್ಕಿನ ಉದ್ಯಮ ಸ್ಥಾಪಿಸಬೇಕು. ಉಕ್ಕು ರಾಷ್ಟ್ರದ
ಬೆನ್ನೆಲುಬಾಗಬೇಕು.
· ಭಾರತದಲ್ಲಿ ವಿಜ್ನಾನ ಮತ್ತು ತಂತ್ರಜ್ನಾನಗಳ ಕ್ಷೇತ್ರದಲ್ಲಿ ಮೂಲಭೂತ ಸಂಶೋಧನೆಯನ್ನು ಮುಕ್ತ ವಾತಾವರಣದಲ್ಲಿ ನಡೆಸಲು
ಸಾಧ್ಯವಾಗುವಂತಹ ವಿಶ್ವ ಸ್ತರದ ಸಂಸ್ಥೆಯನ್ನು ಸ್ಥಾಪಿಸಬೇಕು.
· ಭಾರತದಲ್ಲಿ ಒಂದು ಹೈಡ್ರೋ ಎಲೆಕ್ಟ್ರಿಕ್ ವಿದ್ಯುತ್ ಸ್ಥಾವರ ಸ್ಥಾಪಿಸಬೇಕು.
· ಭಾರತದಲ್ಲಿ ಭಾರತೀಯರಿಗೆ ಪ್ರವೇಶಾವಕಾಶವಿರುವ ಒಂದು ಲಕ್ಷುರಿ ಹೋಟೆಲ್ ಪ್ರಾರಂಭಿಸಬೇಕು.

ಆಗಿನ ಭಾರತ ಸರ್ಕಾರದಲ್ಲಿನ ಬ್ರಿಟಿಷ ಅಧಿಕಾರಿಗಳು ಅವರ ಹಾದಿಯಲ್ಲಿ ಒಡ್ಡಿದ ಅನೇಕ ಅಡಚಣೆಗಳನ್ನು ಲೆಕ್ಕಿಸದೆ ತಮ್ಮ ಉದ್ದೇಶ್ಯವನ್ನು ಸಾಧಿಸುವ ಛಲ ಹಿಡಿದು ತಮ್ಮ ಕನಸನ್ನು ನನಸಾಗಿಸಲು ಅವರು ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಬೇರೆಯವರಾಗಿದ್ದಿದ್ದರೆ ಯಾವಾಗಲೋ ಕೈಚೆಲ್ಲಿ ಕೂಡುತ್ತಿದ್ದರು.

ವಿಪರ್ಯಾಸವೆಂದರೆ ಈ ಮೇಲಿನ ಪ್ರಥಮ ಮೂರು ಯೋಜನೆಗಳು ಕಾರ್ಯರೂಪಕ್ಕೆ ಬರುವುದನ್ನು ನೋಡುವ ಭಾಗ್ಯ ಜಮ್‍ಷೆಡ್ಜಿಯವರದಾಗಿರಲಿಲ್ಲ. 19 ಮೇ 1904ರಲ್ಲಿ ಜಮ್‍ಷೆಡ್ಜಿಯವರ ನಿಧನವಾಯಿತು. ಮುಂಬೈನಲ್ಲಿ 1902ರಲ್ಲಿ ಪ್ರಾರಂಭವಾದ ತಾಜ್‍ಮಹಲ್ ಹೋಟೆಲ್ ಅನಾವರಣವನ್ನು ನೋಡುವ ಭಾಗ್ಯ ಮಾತ್ರ ಅವರದಾಗಿತ್ತು.

ಆದರೆ ಅವರ ದೂರದೃಷ್ಟಿ ಮತ್ತು ಮುಂದಾಲೋಚನೆಗಳ ಪೂರ್ಣ ವಿವರಗಳು ಲಿಖಿತ ರೂಪದಲ್ಲಿ ವ್ಯಕ್ತಗೊಂಡಿದ್ದರಿಂದ ಅವರ ಯೋಜನೆಗಳನ್ನು ಸಾಕಾರಗೊಳಿಸಲು ಅವರ ಮಕ್ಕಳು ಮತ್ತು ಒಬ್ಬ ಸ್ವಾಮಿನಿಷ್ಠ ಅನುಯಾಯಿಗೆ ಸಾಧ್ಯವಾಯಿತು.

ಉಕ್ಕಿನ ಸ್ಥಾವರ:

ತಮ್ಮ ಕಾಟನ್ ವ್ಯಾಪಾರದ ನಿಮಿತ್ತ ಅನೇಕ ಸಾರಿ ಇಂಗ್ಲೆಂಡ್‍ಗೆ ಪ್ರಯಾಣ ಮಾಡುತ್ತಿದ್ದ ಜಮ್‍ಶೆಡ್ಜಿ ಒಮ್ಮೆ ಮ್ಯಾನ್‍ಚೆಸ್ಟರ್‍ಗೆ ಭೇಟಿಯಿತ್ತಾಗ ಅಲ್ಲಿ ಸ್ಕಾಟ್ಲೆಂಡಿನ ಪ್ರಖ್ಯಾತ ಲೇಖಕ ಥಾಮಸ್ ಕಾರ್ಲೈಲ್‍ನ ಭಾಷಣ ಕೇಳುವ ಅವಕಾಶ ದೊರಕಿತು. ಭಾಷಣದಲ್ಲಿ ಒಂದು ವಾಕ್ಯ “the nation which gains control of iron soon acquires the control of gold” ಅವರ ಮನಸ್ಸಿನಲ್ಲಿ ನಾಟಿತು. ಭಾರತದಲ್ಲಿ ಒಂದು ಆಧುನಿಕ ಉಕ್ಕು ಉತ್ಪಾದನಾ ಸ್ಥಾವರ ಸ್ಥಾಪಿಸಬೇಕು ಎನ್ನುವ ಆಸೆ ಅವರ ಮನದಲ್ಲಿ ಮೊಳೆಯತೊಡಗಿತು. ಈ ಆಸೆ ಮುಂದಿನ ಇಪ್ಪತ್ತೈದು ವರ್ಷಗಳ ಕಾಲ ಮತ್ತಷ್ಟು ಪ್ರಬಲವಾಗಿ ಮುಂದೆ ಭಾರತದ ಸರ್ವ ಪ್ರಥಮ ಉಕ್ಕಿನ ಕಾರ್ಖಾನೆ ಸ್ಥಾಪನೆಗೆ ಎಡೆಯಾಯಿತು.

1899ರಲ್ಲಿ ಕಾಸಿಪೋರ್ ಆರ್ಡಿನೆನ್ಸ್ ಕಾರ್ಖಾನೆಯ ಸೂಪರಿಡೆಂಟ್ ಆಗಿದ್ದ ಮೇಜರ್ ಆರ್. ಎಚ್. ಮಹೋನ್ ಭಾರತದಲ್ಲಿ ಉಕ್ಕಿನ ಉತ್ಪಾದನೆಯ ಸಂಭಾವನೆಯ ಬಗ್ಗೆ ಬರೆದ ವರದಿಯನ್ನು ಆಧರಿಸಿ ಆಗಿನ ವೈಸ್‍ರಾಯ್ ಲಾರ್ಡ್ ಕರ್ಜನ್ ಅನೇಕ ಬ್ರಿಟಿಷ್ ಉದ್ಯಮಿಗಳಿಗೆ ಬಂಡವಾಳ ಹೂಡಲು ಆಹ್ವಾನವಿತ್ತರು. ಗಣಿಗುತ್ತಿಗೆ ನಿಯಮಗಳನ್ನು ಸಡಿಲಗೊಡಿಸಿ, ಗಣಿಗಾರಿಕೆ ಉದ್ಯಮಕ್ಕೆ ಅನೇಕ ಸವಲತ್ತು ಒದಗಿಸಲು ಮುಂದಾದರು. ಬ್ರಿಟಿಷ್ ಉದ್ಯಮಿಗಳು ಯಾರೂ ಮುಂದೆ ಬರದಿದ್ದಾಗ ಜಮ್‍ಶೆಡ್ಜಿ ಈ ಅವಕಾಶವನ್ನು ಎರಡೂ ಕೈಯಿಂದ ಬಾಚಿಕೊಂಡು ಅತ್ಯಾಧುನಿಕ ಉಕ್ಕಿನ ಸ್ಥಾವರದ ನಿರ್ಮಾಣಕ್ಕೆ ಅಣಿಯಾದರು.ಟಾಟಾರವರ ಉಕ್ಕಿನ ಉತ್ಪಾದನಾ ಘಟಕದ ಸುದ್ದಿ ಬಯಲಾದಾಗ ಅವರನ್ನು ಲೇವಡಿ ಮಾಡಿದವರದೆಷ್ಟೋ ಮಂದಿ. ಗ್ರೇಟ್ ಇಂಡಿಯನ್ ಪೆನಿನ್ಸುಲಾರ್ ರೈಲ್ವೆಯ ಚೀಫ್ ಕಮೀಷನರ್ ಆಗಿದ್ದ ಸರ್ ಫ್ರೆಡರಿಕ್ ಅಪ್ಕಾಟ್ ಅವರ “ I promise to eat every pound of steel rail [the Tatas] succeed in making" ಹೇಳಿಕೆ ಜಮ್‍ಶೆಡ್ಜಿಯವರ ನಿರ್ಧಾರವನ್ನು ಇನ್ನೂ ಬಲಪಡಿಸಿತು.
ತಮ್ಮ ಆರೊಗ್ಯ ಸರಿ ಇಲ್ಲದಿದ್ದರೂ ೧೯೦೨ರಲ್ಲಿ ಅಮೇರಿಕದ ಪ್ರವಾಸ ಕೈಗೊಂಡರು. ಅಮೇರಿಕದ ಪ್ರಖ್ಯಾತ ಕನ್ಸಲ್ಟಿಂಗ್ ಎಂಜಿನಿಯರ್ ಚಾರ್ಲ್ಸ್ ಪೇಜ್ ಪೆರಿನ್ ನೆರವಿನಿಂದ ಬಿಹಾರದ ಸಾಕ್ಚಿಯ ಬಳಿ ಉಕ್ಕಿನ ಸ್ಥಾವರ ಸ್ಥಾಪಿಸುವುದು ಎಂಬ ನಿಶ್ಚಯವಾಯಿತು. ದುರದೃಷ್ಟವಶಾತ್ ತಮ್ಮ ಕನಸು ನನಸಾಗುವುದನ್ನು ಜಮ್‍ಷೆಡ್ಜಿ ನೋಡಲಾಗಲಿಲ್ಲ. ಟಾಟಾ ಐರನ್ ಅಂಡ್ ಸ್ಟೀಲ್ ವರ್ಕ್ಸ್ ಪ್ರಾರಂಭವಾಗಿದ್ದು 1912ರಲ್ಲಿ ಅಂದರೆ ಜಮ್‍ಷೆಡ್ಜಿಯವರ ನಿಧನದ ಎಂಟು ವರ್ಷಗಳ ನಂತರ. ಆಗಿನ ಸಾಕ್ಚಿ ಈಗಿನ ಝಾರ್ಖಂಡ್ ರಾಜ್ಯದ ಜಮ್‍ಷೆಡ್‍ಪುರ್.

ಭಾರತೀಯ ವಿಜ್ನಾನ ಸಂಸ್ಥೆ:

ತನ್ಮಧ್ಯೆ 1890ರ ವೇಳೆಗೆ ಜಮ್‍ಷೆಡ್ಜಿಯವರಿಗೆ ಭಾರತದಲ್ಲಿ ವಿಜ್ನಾನ ಮತ್ತು ತಂತ್ರ ಜ್ನಾನದ ಕ್ಷೇತ್ರದಲ್ಲಿ ಮೂಲಭೂತ ಸಂಶೋಧನೆ ನಡೆಸಲು ಒಂದು ಸಂಸ್ಥೆಯನ್ನು ಸ್ಥಾಪಿಸಬೇಕೆಂಬ ಪ್ರಬಲ ಇಛ್ಛೆ ಜಾಗೃತವಾಗಿತ್ತು. ಈ ನಿಟ್ಟಿನಲ್ಲಿ ಅವರು ತಮ್ಮ ಅನಿಸಿಕೆಗಳನ್ನು ಅನೇಕರಲ್ಲಿ ತೋಡಿಕೊಂಡಿದ್ದರು. 1898ರಲ್ಲಿ ಜಪಾನಿನಿಂದ ಅಮೇರಿಕಕ್ಕೆ ಹೋಗುತ್ತಿದ್ದ ಹಡಗಿನಲ್ಲಿ ಜಮ್‍ಶೆಡ್ಜಿಯವರಿಗೆ ಅದೇ ಹಡಗಿನಲ್ಲಿ ಶಿಕಾಗೋ ಸರ್ವಧರ್ಮ ಸಮ್ಮೇಳನಕ್ಕಾಗಿ ಹೋಗುತ್ತಿದ್ದ ಸ್ವಾಮಿ ವಿವೇಕಾನಂದರ ಪರಿಚಯವಾಯಿತು. ಜಮ್‍ಶೆಡ್ಜಿಯವರು ಭಾರತದಲ್ಲಿ ತಮ್ಮ ಉಕ್ಕಿನ ಕಾರ್ಖಾನೆಯ ಮತ್ತು ವಿಜ್ನಾನ ಸಂಶೋಧನಾ ಕೇಂದ್ರದ ಕನಸುಗಳ ಬುತ್ತಿ ಬಿಚ್ಚಿಟ್ಟರು. ಸ್ವಾಮಿ ವಿವೇಕಾನಂದರು ಅವರ ಪ್ರಯತ್ನವನ್ನು ಹರಸಿ ಅವರ ಪ್ರಯತ್ನಕ್ಕಾಗಿ ಶುಭ ಕೋರಿದರು.
ಆಮೇಲೆ 1898 ರಲ್ಲಿ ಜಮ್‍ಷೆಡ್ಜಿ ತಮ್ಮ ಸ್ವಂತ ಆಸ್ತಿಯಿಂದ30 ಲಕ್ಷ ರೂಪಾಯಿಗಳನ್ನು ಇಂತಹ ಸಂಸ್ಥೆಗಾಗಿ ಮುಡಿಪಾಗಿಟ್ಟರು. ಆಗಿನ ವೈಸ್‍ರಾಯ್ ಲಾರ್ಡ್ ಕರ್ಜನ್‍ರವರಿಗೆ ತಮ್ಮ ಯೋಜನೆಯ ವಿವರಗಳನ್ನು ಸಲ್ಲಿಸಿ ಸ್ವಾಮಿ ವಿವೇಕಾನಂದರಿಗೆ ತಮ್ಮ ಯೋಜನೆಯ ಬೆಂಬಲ ಕೋರಿದರು.

23ನೇ ನವೆಂಬರ್ 1898ರಂದು ಸ್ವಾಮಿ ವಿವೇಕಾನಂದರಿಗೆ ಬರೆದ ಕಾಗದದಲ್ಲಿ

Dear Swami Vivekananda,

I trust you remember me as a fellow traveler on your voyage from Japan to Chicago. I very much recall at this moment your views on the growth of the ascetic spirit in India, and the duty, not of destroying, but of diverting it into useful channels.

I recall these ideas in connection with my scheme of Research Institute of Science for India , of which you have doubtless heard or read. It seems to me that no better use can be made of the ascetic spirit than the establishment of monasteries or residential halls for men dominated by this spirit, where they should live with ordinary decency, and devote their lives to the cultivation of sciences – natural and humanistic. I am of the opinion that, if such a crusade in favour of an asceticism of this kind were undertaken by a competent leader, it would greatly help asceticism, science, and the good name of our common country; I know not who would make a more fitting general of such a campaign than Vivekananda. Do you think you would care to apply yourself to the mission of galvanizing into life of our traditions in this respect? Perhaps you had better begin with a fiery pamphlet rousing our people in this matter. I should cheerfully defray all the expenses of publication.

I am, Dear Swami,
Yours faithfully,
Jamsetji N. Tata

ಇದಕ್ಕೆ ಪ್ರತ್ಯುತ್ತರವಾಗಿ ಸ್ವಾಮಿ ವಿವೇಕಾನಂದರು ತಮ್ಮ ಬೆಂಬಲ ಸೂಚಿಸಿ ಲಾರ್ಡ್ ಕರ್ಜನ್‍ರವರಿಗೆ ಬರೆದ ಪತ್ರದಲ್ಲಿ

"I am not aware if any project at once so opportune and so far reaching in its beneficent effects has ever been mooted in India... The scheme grasps the vital point of weakness in our national well-being with a clearness of vision and tightness of grip, the mastery of which is only equalled by the munificence of the gift that is being ushered to the public." ಎಂದು ಬರೆದರು.

ಇಷ್ಟೆಲ್ಲ ಜನರ ಬೆಂಬಲವಿದ್ದಾಗ್ಯೂ ಈ ವಿಜ್ನಾನ ಸಂಸ್ಥೆ ಅಸ್ಥಿತ್ವಕ್ಕೆ ಬರಲು ಇನ್ನೂ ಹನ್ನೆರಡು ವರ್ಷಗಳು ಬೇಕಾಯಿತು. ಆದರೆ ಇದನ್ನು ನೋಡುವ ಭಾಗ್ಯ ಸ್ವಾಮಿ ವಿವೇಕಾನಂದ ( ನಿಧನ 1902) ಹಾಗೂ ಜಮ್‍ಷೆಡ್ಜಿ (ನಿಧನ 1904) ಇಬ್ಬರಿಗೂ ಇರಲಿಲ್ಲ.

ಕನಸು ನನಸಾದ ಬಗೆ:

ಜಮ್‍ಷೆಡ್ಜಿಯವರ ಯೋಜನೆಗಳನ್ನು ಅವರ ನಿಧನಾನಂತರ ಕಾರ್ಯರೂಪಕ್ಕೆ ತರಲು ಅವರ ಮಕ್ಕಳಾದ ದೊರಾಬ್ ಮತ್ತು ರತನ್ ಟಾಟಾರವರು ಅವರ ಇಛ್ಛಾನುಸಾರ ಶ್ರಧ್ಧಾಪೂರ್ವಕವಾಗಿ ನಡೆದುಕೊಂಡದ್ದೇನೋ ಸರಿಯೇ. ಆದರೆ ಜಮ್‌ಷೆಡ್ಜಿಯವರ vision ಮತ್ತು passion ಅನ್ನು ರಕ್ತಗತ ಮಾಡಿಕೊಂಡು ಅವರ ಊಹೆಗೂ ಮೀರಿದ ರೀತಿಯಲ್ಲಿ ಸಾಕಾರಗೊಳಿಸುವಲ್ಲಿ ಅವರ ಅತ್ಯಂತ ಸ್ವಾಮಿನಿಷ್ಠ ಪ್ರತಿಭಾಶಾಲಿ ಅನುಯಾಯಿಯೊಬ್ಬರ ದೇಣಿಗೆ ಬಹಳ ಜನರಿಗೆ ತಿಳಿದಿಲ್ಲದಿರಬಹುದು.

ಈ ವ್ಯಕ್ತಿಯ ಹೆಸರು ಬುರ್ಜೊರ್ಜಿ ಜಮಾಸ್ಪ್ಜಿ ಪಾದ್‍ಶಾ ( 1864-1941). ಈತ ಜಮ್‍ಷೆಡ್ಜಿಯ ಆಪ್ತ ಸ್ನೇಹಿತರ ಮಗ. 1994ರಲ್ಲಿ ಜಮ್‍ಶೆಡ್ಜಿಯವರ ಆಪ್ತಸಹಾಯಕನಾಗಿ ಸೇರಿದ ಅಪ್ರತಿಮ ಮೇಧಾವಿ ಇವರು. ವಿದ್ಯಾಭ್ಯಾಸದಲ್ಲಿ ಫಸ್ಟ್ ಕ್ಲಾಸ್ ಫಸ್ಟ್. Walking encyclopaedia ಎಂದು ಹೆಸರಾಗಿದ್ದ ಇವರ ಜ್ನಾಪಕ ಶಕ್ತಿ ವಿಸ್ಮಯಕಾರಿಯಾಗಿತ್ತಂತೆ. ಗಣಿತದ ಕ್ಲಿಷ್ಟ ಸಮಸ್ಯೆಗಳನ್ನು ಕಾಗದದ ಮೇಲೆ ಬರೆಯದೆ ಮನಸ್ಸಿನಲ್ಲೇ ಬಿಡಿಸುವ ಚಾತುರ್ಯವಿತ್ತೆಂದು ಪ್ರತೀತಿ. ಸೌಮ್ಯ ಸ್ವಭಾವ ಆದರೂ ಬಿಡದ ಹಠ. ವ್ಯವಹಾರ ಮತ್ತು ಚರ್ಚೆಯಲ್ಲಿ ಮೀರಿಸುವರಿಲ್ಲ. ಅಂಕಿ ಅಂಶಗಳೆಲ್ಲ ಬೆರಳ ತುದಿಯಲ್ಲಿ.
ಸರ್ಕಾರಿ ಅಧಿಕಾರಿಗಳು , ತಂತ್ರಜ್ನರು, ಕಾರ್ಮಿಕರು ಎಲ್ಲರೊಡನೆಯೂ ಹೊಂದಿಕೊಂಡು ದಿನಕ್ಕೆ ಸುಮಾರು ಹದಿನೆಂಟಕ್ಕೂ ಹೆಚ್ಚು ಘಂಟೆ ದುಡಿಯುವ ಕ್ಷಮತೆ. ಭಾರತೀಯ ವಿಜ್ನಾನ ಸಂಸ್ಥೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಅದರ ಮೊದಲ ಡೈರೆಕ್ಟರ್ ಅವರನ್ನು ಆರಿಸುವುದರಿಂದ ಅದರ ಸಂವಿಧಾನದ ಕರಡು ಪ್ರತಿಯನ್ನು ಬರೆಯುವ ತನಕ ಎಲ್ಲ ಕೆಲಸವನ್ನೂ ಸ್ವತಃ ತನ್ನ ಕೈಯಲ್ಲೇ ಮಾಡಿದ ಸೂಪರ್‍ಮ್ಯಾನ್. ಭಾರತೀಯ ವಿಜ್ನಾನ ಸಂಸ್ಥೆ 1911ರಲ್ಲಿ ಪ್ರಾರಂಭವಾದ ಕೂಡಲೆ ಅದರ ಕೌನ್ಸಿಲ್‍ಗೆ ರಾಜಿನಾಮೆಯಿತ್ತು ಟಾಟಾ ಉಕ್ಕಿನ ಸ್ಥಾವರದ ಕೆಲಸದಲ್ಲಿ ತೊಡಗಿಸಿಕೊಂಡರು. ಟಾಟಾ ಹೈಡ್ರೋ ಎಲೆಕ್ಟ್ರಿಕ್ ಪವರ್ ಕಂಪನಿಯ ವಿನ್ಯಾಸದಿಂದ ಅನಾವರಣದವರೆಗೂ ಎಲ್ಲ ಹೊಣೆಗಾರಿಕೆಯೂ ಈತನದೆ. ಜಮ್‍ಷೆಡ್ಜಿಯವರ ಮರಣಾನಂತರ 1905ರಲ್ಲಿ ದೊರಾಬ್ ಮತ್ತು ರತನ್ ಟಾಟಾ ರವರನ್ನು ಹುರಿದುಂಬಿಸಿ ಬ್ಯಾಂಕ್ ಆಫ್ ಇಂಡಿಯಾ ಸ್ಥಾಪನೆಗೆ ಕಾರಣಕರ್ತರಾದರು. ಇನ್ಶೂರೆನ್ಸ್ ವ್ಯವಹಾರದ ಆಳ ಅಧ್ಯಯನ ಮತ್ತು ಸಂಶೋಧನೆ ಮಾಡಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಯ ಸ್ಥಾಪನೆಗೆ ಹಾದಿ ಮಾಡಿಕೊಟ್ಟರು. ‘simple living and high thinking” ಎಂಬ ಹೇಳಿಕೆಗೆ ಇವರೇ ನಿದರ್ಶನ ಎಂದು ಬಾಳಿ ತೋರಿಸಿದರು. ಸೌಮ್ಯ ಸ್ವಭಾವದ ಬುರ್ಜೋರ್ಜಿ ಪಾದ್‍ಶಾ ಎಲೆಮರೆಯ ಕಾಯಿಯಂತೆ ಕೆಲಸ ಮಾಡಿ ಭಾರತದ ಏಳಿಗೆಗಾಗಿ ಮಾಡಿದ ಅನುದಾನ ಅಪರಿಮಿತ.

ಜಮ್‍ಷೆಡ್ಜಿಯವರ ಅದೃಷ್ಟವೋ ಭಾರತದ ಭಾಗ್ಯವೋ, ಪಾದ್‍ಶಾರಂತಹ ಸ್ವಾಮಿನಿಷ್ಠರ ಸಾಧನೆಯಿಂದ ಭಾರತದ ಘನತೆಗೆ ಮೆರುಗು ಹತ್ತಿದೆ.

ಜಮ್‍ಷೆಡ್ಜಿ ಮತ್ತು ಬೆಂಗಳೂರು:

ಬೆಂಗಳೂರಿಗೂ ಟಾಟಾರವರಿಗೂ ಅದೇನೋ ಅದೃಷ್ಟದ ನಂಟು.

ಭಾರತೀಯ ವಿಜ್ನಾನ ಸಂಸ್ಥೆ ನಮ್ಮ ಬೆಂಗಳೂರಿನಲ್ಲಿ ಸ್ಥಾಪನೆಯಾಗಲು ಕಾರಣಿಭೂತರು ಇನ್ನೂ ಹಲವರನ್ನು ನೆನೆಸಿಕೊಳ್ಳುವುದು ಉಚಿತ. 1898ರಲ್ಲಿ ಲಾರ್ಡ್ ಕರ್ಜನ್ ನೇಮಿಸಿದ ಸಮಿತಿಯೊಂದು ಉತ್ತರ ಪ್ರದೇಶದ ರೂರ್ಕಿಯಲ್ಲಿ ಸ್ಥಾಪಿಸಬೇಕೆಂದು ಶಿಫಾರಸು ಮಾಡಿತ್ತು. ಇದರ ಸುಳಿವು ಹತ್ತಿದ ಕೂಡಲೆ ಆಗಿನ ಮೈಸೂರಿನ ದಿವಾನ್ ಶೇಷಾದ್ರಿ ಅಯ್ಯರ್ ಅವರು ಮಹಾರಾಣಿ ರೀಜೆಂಟ್‍ರವರ ಮನವೊಲಿಸಿ 1899ರಲ್ಲಿಯೇ ಬೆಂಗಳೂರಿನ ಉತ್ತರದಲ್ಲಿ 372 ಎಕರೆ ಜಮೀನನ್ನು ಸಂಸ್ಥೆಗಾಗಿ ದಾನ ಮಾಡಿಸಿದರು. ಇದಾದ ಹತ್ತು ವರ್ಷಗಳ ನಂತರ ವಿಜ್ನಾನ ಸಂಸ್ಥೆಯ ಕಟ್ಟಡದ ಶಂಕುಸ್ಠಾಪನೆ ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ರವರ ಅಮೃತ ಹಸ್ತದಿಂದ ನೆರವೇರಿತು. ಸರಿಯಾದ ಹೊತ್ತಿನಲ್ಲಿ ರಾಜಮನೆತನದ ಹಾಗೂ ದಿವಾನ್ ಶೇಷಾದ್ರಿ ಅಯ್ಯರ್‍ರವರ ಹಸ್ತಕ್ಷೇಪವಾಗಿಲ್ಲದಿದ್ದರೆ ಭಾರತೀಯ ವಿಜ್ನಾನ ಸಂಸ್ಥೆ ಬೆಂಗಳೂರಿನಲ್ಲಂತೂ ಇರುತ್ತಿರಲಿಲ್ಲ.

ಜಮ್‍ಶೆಡ್ಜಿಯವರು ಮೈಸೂರು ಸಿಲ್ಕ್ ಉದ್ಯಮದ ಬೆಳವಣಿಗೆಗಾಗಿ ಶ್ರಮಿಸಿ 1902ನೇ ಇಸವಿಯಲ್ಲಿ ಬೆಂಗಳೂರಿನಲ್ಲಿ ಟಾಟಾ ಸಿಲ್ಕ್ ಫಾರ್ಮ್ ಸ್ಥಾಪಿಸಿ ಎಂಟು ವರ್ಷಗಳ ಕಾಲ ನಡೆಸಿ ಮೈಸೂರು ಸಂಸ್ಥಾನಕ್ಕೆ ಬಿಟ್ಟು ಕೊಟ್ಟದ್ದು ಇಂದಿನ ಅನೇಕರಿಗೆ ತಿಳಿದಿರಲಿಕ್ಕಿಲ್ಲ.
1893ನೇ ಇಸವಿಯಲ್ಲಿ ಜಪಾನ್ ದೇಶಕ್ಕೆ ಭೇಟಿಯಿತ್ತ ಜಮ್‍ಷೆಡ್ಜಿ ಅಲ್ಲಿಯ ರೇಷ್ಮೆ ಕೃಷಿಯಿಂದ ಆಕರ್ಷಿತರಾದರು. ಭಾರತದಲ್ಲಿಯೂ ಜಪಾನ್ ಮಾದರಿಯ ಕೃಷಿಯನ್ನು ನಮ್ಮ ರೈತರಿಗೆ ಹೇಳಿಕೊಡುವ ಉದ್ದೇಶದಿಂದ ಬೆಂಗಳೂರಿನ ದಕ್ಷಿಣದಲ್ಲಿ ಒಂದು ಸಿಲ್ಕ್ ಫಾರ್ಮ್ ಸ್ಥಾಪಿಸಲೋಸುಗ ಮೈಸೂರು ಸರ್ಕಾರದಿಂದ ಜಮೀನನ್ನು ಬಾಡಿಗೆಗೆ ತೆಗೆದುಕೊಂಡರು. ಹತ್ತು ಬೇಸಿನ್‍ಗಳ ಸಾಮರ್ಥ್ಯವುಳ್ಳ ಫಿಲೇಚರ್ ಅನ್ನು ಅಣಿಗೊಳಿಸಿ ಫಾರ್ಮ್‍ನಲ್ಲಿ ವಿವಿಧ ಜಾತಿಯ ಮುಲ್ಬೆರಿ ಸೊಪ್ಪಿನ ಗಿಡಗಳನ್ನು ಬೆಳೆಸಿದರು. ಈ ಫಾರ್ಮ್ ಜಪಾನೀ ಪಧ್ಧತಿಯ ಅನುಸಾರ ನಡೆಯಬೇಕೆಂದು ಜಪಾನಿನಿಂದ ತಜ್ನ ದಂಪತಿಗಳ ನ್ನು ಕರೆಸಿಕೊಂಡರು. ಈ ಫಾರ್ಮ್‍ನಲ್ಲಿ ಅನೇಕ ಯುವಕರಿಗೆ ಮತ್ತು ರೈತರಿಗೆ ರೇಷ್ಮೆ ಕೃಷಿಯ ಬಗ್ಗೆ, ಹುಳಗಳ ಬೆಳೆಸುವ, ಹುಳಗಳಿಗೆ ಬರುವ ಖಾಯಿಲೆಗಳನ್ನು ನಿವಾರಿಸುವ, ರೇಷ್ಮೆ ಗೂಡುಗಳ ಉಸ್ತುವಾರಿ, ರೇಷ್ಮೆ ಎಳೆಗಳ ರೀಲಿಂಗ್ ಮತ್ತು ರೀರೀಲಿಂಗ್ ಬಗ್ಗೆ ಜಪಾನಿ ತಂತ್ರಜ್ನಾನ ಕಲಿಸುವುದರಲ್ಲಿ ಯಶಸ್ವಿಯಾಯಿತು. ಈ ಸಿಲ್ಕ್ ಫಾರ್ಮ್‍ನ ಮಾದರಿಯಾಗಿಟ್ಟುಕೊಂಡು ಪಂಜಾಬ್. ಸಿಲೋನ್ ಮುಂತಾದ ಸ್ಠಳಗಳಲ್ಲಿ ಹೊಸ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಯಿತು. ಲಾಭದ ದೃಷ್ಟಿಯಿಲ್ಲದ ಇಂತಹ ಪ್ರಯತ್ನ ಯಶಸ್ವಿಯಾದೊಡನೆ ಫಾರ್ಮ್‍ನ ಉಸ್ತುವಾರಿಯನ್ನು ಮೈಸೂರು ಸರ್ಕಾರಕ್ಕೆ ಒಪ್ಪಿಸಲಾಯಿತು. ಆದರೆ ಇಂದು ಈ ಫಾರ್ಮ್ ಅಸ್ತಿತ್ವದಲ್ಲಿ ಇಲ್ಲದೆ , ಹೆಸರೊಂದನ್ನು ಬಿಟ್ಟು ಬೇರೆ ಯಾವ ಕುರುಹೂ ಕಾಣಿಸದು.

ಜಮ್‍ಶೆಡ್ಜಿಯವರು ಸ್ಥಾಪಿಸಿದ ಭಾರತೀಯ ವಿಜ್ನಾನ ಸಂಸ್ಥೆ ಈ ವರ್ಷ ಮೇ ತಿಂಗಳಲ್ಲಿ ಶತಮಾನೋತ್ಸವ ಆಚರಿಸಲಿದೆ. ಕರ್ನಾಟಕದಲ್ಲಿಯೇ 1000ಎಕರೆಗೂ ಹೆಚ್ಚಿನ ಇನ್ನೊಂದು ಕ್ಯಾಂಪಸ್ ಉದ್ಘಾಟಿಸುವ ಯೋಜನೆಯಿದೆ. ಪ್ರಸ್ತುತ ವಿಜ್ನಾನ ಸಂಸ್ಥೆಯ ಕೋರ್ಟ್ ಅಧ್ಯಕ್ಷ ರತನ್ ಟಾಟಾ ಅವರ ನೇತೃತ್ವದಲ್ಲಿ ಮುಂದಿನ ನೂರು ವರ್ಷಗಳ Vision Statement ರೂಪಿಸುವ ನಿಟ್ಟಿನಲ್ಲಿ ವಿಶ್ವ ವ್ಯಾಪಿ ವಿಚಾರ ವಿನಿಮಯ ಆರಂಭವಾಗಿವೆ.

ಜಮ್‍ಶೆಡ್ಜಿಯವರ ಕಾರ್ಮಿಕರಿಗಾಗಿ ಕಾಳಜಿ ಮತ್ತು ಪರಿಸರ ಪ್ರೇಮ:

ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಮುನ್ನವೇ ಜಮ್‍ಷೆಡ್ಜಿಯವರು ತಮ್ಮ ಕಾರ್ಮಿಕರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದರು. ಬೇರೆಡೆಗಿಂತ ಕಡಿಮೆ ಕಾರ್ಯದ ಸಮಯ, ಗಾಳಿ ಬೆಳಕಿರುವ ಆರೋಗ್ಯಕರ ಕಾರ್ಯ ಪರಿಸರ, ಕಾರ್ಮಿಕರಿಗಾಗಿ ಪ್ರಾವಿಡೆಂಟ್ ಫಂಡ್ ಮತ್ತು ಗ್ರಾಚುಟಿಯಂತಹ ಸವಲತ್ತುಗಳನ್ನು ತಮ್ಮ ಕಾರ್ಖಾನೆಯ ಕಾರ್ಮಿಕರಿಗೆ ಆಗಿನ ಕಾಲದಲ್ಲಿಯೇ ಕೊಡುವ ವ್ಯವಸ್ಥೆ ಮಾಡಿದ್ದರು. ಉಕ್ಕಿನ ಸ್ಥಾವರದ ಸ್ಥಾಪನೆ ಗೆ ಇನ್ನೂ ಐದು ವರ್ಷದ ಮುನ್ನವೇ ಕಾರ್ಮಿಕರಿಗಾಗಿ ಸುಂದರ ನಗರವನ್ನು ವಿನ್ಯಾಸ ಮಾಡಲು ತಮ್ಮ ಮಕ್ಕಳಾದ ದೊರಾಬ್ ಮತ್ತು ರತನ್ ಟಾಟಾ ರವರಿಗೆ ಒಂದು ಪತ್ರ ಬರೆದು ತಮ್ಮ ಆಸೆಯನ್ನು ತೋಡಿಕೊಂಡಿದ್ದರು.

"Be sure to lay wide streets planted with shady trees, every other of a quick-growing
variety, Be sure that there is plenty of space for lawns and gardens. Reserve large areas for football, hockey and parks. Earmark areas for Hindu temples, Mohammedan mosques and Christian churches."

ಜೆ. ಆರ್. ಡಿ ಟಾಟಾ ರವರ ಕಾಲದಲ್ಲಿ ಜಮ್‍ಷೆಡ್ಜಿಯವರ ಇಛ್ಛೆಯ ಪ್ರಕಾರ ಜಮ್‍ಷೆಡ್‍ಪುರ್ ಒಂದು ಸುಂದರ ಔದ್ಯೋಗಿಕ ನಗರವಾಗಿ ರೂಪುಗೊಂಡಿದೆ.

ತಾವು ಸಂಪಾದಿಸಿದ ಅಪಾರ ಸಂಪತ್ತನ್ನು ಭಾರತದ ನಾಗರಿಕರ ಕಲ್ಯಾಣಕ್ಕಾಗಿ ನೀರಿನಂತೆ ಖರ್ಚು ಮಾಡಿದ ತ್ಯಾಗಜೀವಿ ಜಮ್‍ಷೆಡ್ಜಿ ಟಾಟಾ. ಅವರ ಪ್ರತಿಯೊಂದು ಕೆಲಸದಲ್ಲೂ ಭಾರತೀಯ ಸ್ವಾಭಿಮಾನದ ಕಿಡಿಯನ್ನು ಗುರುತಿಸಿದ ಬ್ರಿಟಿಷರು ಅವರಿಗೆ ಯಾವ ಬಿರುದು ಬಾವಲಿಗಳನ್ನು ಕೂಡ ಕೊಡಲು ಸಿಧ್ಧರಿರಲಿಲ್ಲ. ಜೀವನದುದ್ದಕ್ಕೂ ಸಂಘರ್ಷ ನಡೆಸಿ ತಮ್ಮ ಗುರಿ ಸಾಧಿಸುವ ಏಕೈಕ ಆತ್ಮವಿಶ್ವಾಸ ಮತ್ತು ಕೆಚ್ಚು ಅವರಲ್ಲಿತ್ತು. ತಮ್ಮ ಸಮಕಾಲೀನರ ಹೋಲಿಕೆಯಲ್ಲಿ ಜಮ್‍ಷೆಡ್ಜಿ ಅನೇಕ ವರ್ಷಗಳ ಮುಂದಿದ್ದರು.

ಅಪ್ರತಿಮ ದೇಶಭಕ್ತಿ, ಉದಾತ್ತ ಧ್ಯೇಯ, ನಿಷ್ಕಾಮ ಕರ್ಮ, ಪ್ರಾಮಾಣಿಕತೆಗಳ ನೆಲಗಟ್ಟಿನ ಮೇಲೆ ಜಮ್‍ಷೆಡ್ಜಿ ನಸ್ಸೆರ್ವಾನ್‍ಜಿ ಟಾಟಾ ಕಟ್ಟಿದ ಆಧುನಿಕ ಔದ್ಯೋಗಿಕ ಸಾಮ್ರಾಜ್ಯ ಸಮಯದ ಪರೀಕ್ಷೆಯನ್ನು ಮೀರಿ ವಿಶ್ವದ ಒಕ್ಕೂಟದಲ್ಲಿ ಭಾರತದ ಘನತೆಯನ್ನು ಹೆಚ್ಚಿಸಿದೆ.

********************************
Published on 3rd March 2008 in thatskannada.com
http://thatskannada.oneindia.in/literature/people/2008/0303-TATA-institutions-founder-day.html
and on 4th March 2008 in ಸಂಪದ
http://sampada.net/article/7711

1 comment:

Sushrutha Dodderi said...

ಪ್ರಿಯರೇ,

ನಮಸ್ಕಾರ. ಹೇಗಿದ್ದೀರಿ?

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಸುಶ್ರುತ ದೊಡ್ಡೇರಿ